ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನವಾದ ಸೋಮವಾರವೂ ಮುಂದುವರಿದಿದೆ.
ಈ ನಡುವೆ ಪಟ್ಟಣದ ಸಾರಿಗೆ ಘಟಕದ ನೌಕರರ ಕುಟುಂಬದವರು ಸೋಮವಾರ ತಹಸೀಲ್ದಾರ್ ಅವರ ಕಚೇರಿ ಬಳಿ ಜಮಾಯಿಸಿ ಸರ್ಕಾರ ಈ ಹಿಂದೆ ನೀಡಿರುವ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಹಸೀಲ್ದಾರ್ ಕೆ.ಚಂದ್ರಮೌಳಿ ಅವರ ಮೂಲಕ ಸಲ್ಲಿಸಿದರು.
ತಾಪಂ ಸದಸ್ಯ ದಲಿತ ಮುಖಂಡ ಎಸ್.ರಾಮು ಹಾಗೂ ಚಾಮರಾಯನಕೋಟೆ ಜಗದೀಶ್ ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್, ಪಟ್ಟಣದ ಸಾರಿಗೆ ಘಟಕದ ನೌಕರರ ಕುಟುಂಬಸ್ಥರು ಇದ್ದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ವಾಹನಗಳ ಸಂಚಾರ ಹಾಗೂ ಪ್ರಯಾಣಿಕರ ಓಡಾಟ ಎಂದಿನಂತೆ ಇಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ಎಂಬಂತೆ ಕೆಲ ಸಾರಿಗೆ ಬಸ್ ಗಳು ಮಡಿಕೇರಿ ಮೈಸೂರು ಮಾರ್ಗವಾಗಿ ಸಂಚರಿಸಿದವು.
ಚಾಲಕ ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ಕರ್ತವ್ಯಕ್ಕೆ ಗೈರಾದ ಹಿನ್ನೆಲೆ ಸಾರಿಗೆ ಸಂಚಾರದಲ್ಲಿ ಅಸ್ತವ್ಯಸ್ತ ವಾಗಿತ್ತು. ಪಟ್ಟಣದಿಂದ ಹಲವು ನಗರ ಪ್ರದೇಶಗಳಿಗೆ ಖಾಸಗಿ ವಾಹನಗಳ ಸಂಚಾರ ಇತ್ತಾದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಎಂದಿನಂತೆ ಬಸ್ ಸಂಚಾರವಿಲ್ಲದೆ ಪ್ರಯಾಣಿಕರಿಗೆ ಅನನುಕೂಲವಾಗಿ ಖಾಸಗಿ ವಾಹನಗಳ ಮೊರೆ ಹೋಗಿದ್ದರು. ದೈನಂದಿನ ಕೆಲಸಕ್ಕೆ ತೆರಳುವ ಸರ್ಕಾರಿ ಅಧಿಕಾರಿ ಸಿಬ್ಬಂದಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೊರೆ ಹೋಗಿದ್ದರು.
ಮುಂಜಾಗ್ರತಾ ಕ್ರಮವಾಗಿ ಆರಕ್ಷಕ ಇಲಾಖೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಆರನೇ ದಿನವಾದ ಸೋಮವಾರವೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಸೋಮವಾರದಂದು ಸಾರಿಗೆ ನೌಕರರ ಕುಟುಂಬದವರು ಪ್ರತಿಭಟನೆ ನಡೆಸುವ ವಿಷಯ ತಿಳಿದು ಪಟ್ಟಣದ ಬಸ್ ನಿಲ್ದಾಣಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಜಗದೀಶ್ ಮತ್ತು ಸಿಬ್ಬಂದಿ ಪರಿಶೀಲಿಸಿ ಪ್ರತಿಭಟನೆ ನಡೆಯದಂತೆ ಮುಂಜಾಗೃತ ಕ್ರಮ ವಹಿಸಿದ್ದರು.
ಪಟ್ಟಣದ ಸಾರಿಗೆ ಘಟಕದ ಅಧಿಕಾರಿಗಳು ಕೆಲ ಸಿಬ್ಬಂದಿಗಳ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದರಿಂದ ಶನಿವಾರ 4, ಭಾನುವಾರ 6, ಸೋಮವಾರದಂದು 6 ಬಸ್ ಗಳು ಸಾರಿಗೆ ಇಲಾಖೆ ಅಧಿಕಾರಿಗಳ ಭದ್ರತೆಯಲ್ಲಿ ಸಂಚರಿಸಿದವು.
ನೌಕರರಿಗೆ ಕರೆ ಮಾಡಿ ಹಾಗೂ ಪತ್ರಿಕಾ ಪ್ರಕಟಣೆ ಮೂಲಕ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ತರಬೇತಿ ಚಾಲಕ ನಿರ್ವಾಹಕ ಸಿಬ್ಬಂದಿಗೆ ಸೂಚಿಸುತ್ತಿದ್ದು, ಮನವಿಗೆ ಓಗೊಡದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಮುಷ್ಕರದ ನೇತೃತ್ವ ವಹಿಸಿದರೆಂಬ ಕಾರಣದಿಂದ ಪಟ್ಟಣದ ಇಬ್ಬರು ನಿರ್ವಾಹಕರನ್ನು ಚಿಕ್ಕಬಳ್ಳಾಪುರ ಸಾರಿಗೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರನ್ನು ಮತ್ತೆ ಪಟ್ಟಣದಲ್ಲಿಯೇ ಮರು ನಿಯೋಜಿಸಬೇಕೆಂದು ಹಲವು ಚಾಲಕ ನಿರ್ವಾಹಕರು ಒತ್ತಾಯಿಸಿದ್ದಾರೆ.