ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು ಮತ್ತು ಕುಟುಂಬದವರು ಇಂದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಟ್ಟೆ-ಲೋಟ ಬಡಿಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು. ಇದರಿಂದ ಭಯಗೊಂಡ ಸರ್ಕಾರ ಪ್ರತಿಭಟನೆ ನಿರತರನ್ನು ಬಂಧಿಸುವ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿದೆ.
ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಒತ್ತಾಯಿಸಿ, ಸಾರಿಗೆ ನೌಕರರು ಇಂದಿಗೆ ಆರು ದಿನದಿಂದ ನಡೆಸುತ್ತಿರುವ ಮುಷ್ಕರದ ಬಗ್ಗೆ ಚಕಾರವೆತ್ತದ ಸರ್ಕಾರ, ನೌಕರರು ಮತ್ತು ಅವರ ಕುಟುಂಬದವರನ್ನು ಬಂಧಿಸಲು ಮುಂಗಿದೆ.
ಕಳೆದ ಆರು ದಿನದಿಂದ ನೌಕರರ ಮುಷ್ಕರವನ್ನು ಹತ್ತಿಕ್ಕುವಲ್ಲೇ ಮಗ್ನವಾಗಿರುವ ಸರ್ಕಾರ ಅವರನ್ನು ಕರೆದು ಮಾತನಾಡುವ ಸೌಜನ್ಯ ತೋರಿಸಿಲ್ಲ. ಇದರಿಂದ ರೊಚ್ಚಿಗೆದ್ದ ನೌಕರರ ಕುಟುಂಬದವರು ಇಂದು ತಟ್ಟೆ ಲೋಟ ಬಡಿದು ಬೃಹತ್ ಪ್ರತಿಭಟನೆಗೆ ಮುಂದಾಗಿದಕ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದು ದೌರ್ಜನ್ಯ ಮೆರೆದಿದ್ದಾರೆ.
ಅಂದರೆ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದ ಸರ್ಕಾರ ಪೊಲೀಸರ ಮೂಲಕ ನೌಕರರ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಈ ಮೂಲಕ ಕೊಟ್ಟ ಮಾತನ್ನು ತಪ್ಪಿದ ಸರ್ಕಾರ ಇದಾಗಿದೆ.
ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾದ್ಯವಿಲ್ಲ, ಬದಲಿಗೆ ನಿಮಗೆ 6ನೇ ವೇತನ ಆಯೋಗ ಶಿಫಾರಸಿನಂತೆ ವೇತನ ನೀಡಲಾಗುವುದು ಎಂದು ಕಳೆದ 2020 ಡಿಸೆಂಬರ್ 14ರಂದು ಲಿಖಿತವಾಗಿ ಸರ್ಕಾರದ ಸಚಿವರೇ ಕೊಟ್ಟ ಭರವಸೆಯನ್ನು ಇಂದು ಈಡೇರಿಸದೆ ಉದ್ಧಟತನದಿಂದ ವರ್ತಿಸುತ್ತಿರುವುದು ಎಷ್ಟು ಸರಿ ಎಂದು ನೌಕರರು ಮತ್ತು ಅವರ ಕುಟುಂಬದವರು ಕೇಳುತ್ತಿದ್ದು, ನಮ್ಮನ್ನು ಜೈಲಿಗೆ ಹಾಕಿದರು ಸರಿಯೇ ನಾವು ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರೆಗೂ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ರಾಜ್ಯಾದ್ಯಂತ ತಟ್ಟೆ ಲೋಟ ಬಡಿದು ನಡೆಸುತ್ತಿರುವ ಪ್ರತಿಭಟನೆಯಿಂದ ಭಯಗೊಂಡ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ಎಸಗಲು ಮುಂದಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿಬಳಿಯುವ ನಡೆಯಾಗಿದೆ ಎಂದು ನೌಕರರು ಮತ್ತು ಕುಟುಂಬದವರು ಕಿಡಿಕಾರಿದ್ದಾರೆ.
ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರ ಪುಟ್ಟ ಪುಟ್ಟ ಮಕ್ಕಳನ್ನು ವಶಕ್ಕೆ ಪಡೆದಿರುವ ಪೊಲೀಸರು ಒಂದು ರೀತಿಯ ಸರ್ವಾಧಿಕಾರದ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಸಾಮಾನ್ಯ ಜನರು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಾದರೂ ಸರ್ಕಾರ ನೌಕರರ ಬೇಡಿಕೆ ಬಗ್ಗೆ ಇನ್ನೂ ಮಾತನಾಡಲೂ ಮುಂದಾಗದಿರುವುದ ಎಷ್ಟು ಸರಿ ಎಂಬ ಆಕ್ರೋಶದ ಮಾತುಗಳು ರಾಜ್ಯಾದ್ಯಂತ ಕೇಳಿ ಬರುತ್ತಿವೆ. ಹೀಗಾಗಿ ಇನ್ನಾದರು ಸಿಎಂ ಯಡಿಯೂರಪ್ಪ ತನ್ನ ಸರ್ವಾಧಿಕಾರದ ಧೋರಣೆ ಬಿಟ್ಟು ಪ್ರಜೆಗಳಿಂದ ನಾವು ಸರ್ಕಾರ ರಚಿಸಿದ್ದೇವೆ ಎಂಬುದನ್ನು ಮರೆಯದೆ ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಮ್ಮ ಪದವಿಯನ್ನು ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.