NEWSನಮ್ಮಜಿಲ್ಲೆಶಿಕ್ಷಣ

ಆಸ್ತಿಪಾಸ್ತಿ ದಾಖಲೆಗಳ ಸಂರಕ್ಷಣೆ ಮಹತ್ವ- ಉಪಯೋಗದರಿವಿರಬೇಕು: ಮಂಜುನಾಥ್

ವಿಜಯಪಥ ಸಮಗ್ರ ಸುದ್ದಿ

ಕೆ.ಆರ್.ಪೇಟೆ: ನಮ್ಮ ದೇಶ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಯ ಸಂರಕ್ಷಣೆ ಮಾಡಿ ನಮ್ಮ ನೆಲದ ಇತಿಹಾಸ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ವಸ್ತುಗಳಾದ ಪತ್ರಗಳೇ ಅಮೂಲ್ಯವಾದ ದಾಖಲೆಗಳಾಗಿವೆ. ಇಂತಹ ಅಮೂಲ್ಯವಾದ ಪತ್ರಗಳ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಎಂದು ಮೈಸೂರಿನ ವಿಭಾಗೀಯ ಪತ್ರಗಾರದ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಹೇಳಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ವಿದ್ಯಾಲಯದ ಇತಿಹಾಸ ವಿಭಾಗದ ವಿದ್ಯಾರ್ಥಿನಿಯರಿಗೆ ಪತ್ರಾಗಾರ ಕೂಟ ಆಯೋಜಿಸಿದ್ದ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಚರಿತ್ರಾರ್ಹ ಘಟನೆಗಳು, ದೇಶದ ಅಮೂಲ್ಯವಾದ ದಾಖಲೆಗಳು ಹಾಗೂ ಸರ್ಕಾರದ ಆಸ್ತಿಪಾಸ್ತಿ ಕುರಿತ ಅಮೂಲ್ಯವಾದ ದಾಖಲೆಗಳು ಪತ್ರಾಗಾರ ಇಲಾಖೆಯಲ್ಲಿ ಸುರಕ್ಷಿತವಾಗಿರುತ್ತವೆ. ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೂ ನಡೆಯುವ ವಿವಿಧ ಹಂತಗಳ ಚಟುವಟಿಕೆಗಳನ್ನು ಸಂರಕ್ಷಿಸಿ ಜೋಪಾನ ಮಾಡಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ಅತೀ ಅಗತ್ಯವಾಗಿದೆ.

ಹೀಗಾಗಿ ವಿದ್ಯಾರ್ಥಿಗಳು ಪತ್ರಾಗಾರ ಇಲಾಖೆಯ ಮಹತ್ವದ ಬಗ್ಗೆ ತಿಳಿದುಕೊಂಡು ನಿಮ್ಮ ಕುಟುಂಬ ಸೇರಿದಂತೆ ಆಸ್ತಿಪಾಸ್ತಿಯ ದಾಖಲೆಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಜನನ ಮರಣ ಪ್ರಮಾಣ ಪಾತ್ರಗಳು ಕೂಡಾ ಅಮೂಲ್ಯವಾದ ದಾಖಲೆಗಳು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಮಂಜುನಾಥ್ ಕಿವಿಮಾತು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕಿರಣ್ ಕುಮಾರ್ ಕೃಷ್ಣರಾಜಪೇಟೆ ತಾಲೂಕಿನ ಪ್ರಾಚೀನ ಸ್ಮಾರಕಗಳ ಕುರಿತು ಮಾತನಾಡಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಾಲಯಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಹೊಯ್ಸಳ ವಾಸ್ತು ವೈಭವದ ದೇವಾಲಯಗಳಿಗೆ ಕೆ.ಆರ್. ಪೇಟೆ ತಾಲೂಕು ಮಾದರಿಯಾಗಿದ್ದು ಅಮೂಲ್ಯವಾದ ಹತ್ತಾರು ಹೊಯ್ಸಳ ದೇವಾಲಯಗಳನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ ಎಂದು ತಿಳಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಚೂಡಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ನಮ್ಮ ನೆಲ ಹಾಗೂ ಇತಿಹಾಸದ ಬಗ್ಗೆ ತಿಳಿಯಲು ಮತ್ತು ಪ್ರಮುಖವಾದ ದಾಖಲೆಗಳನ್ನು ಸಂರಕ್ಷಣೆ ಮಾಡಲು ಅರಿವಿನ ಜಾಗೃತಿ ಮೂಡಿಸಲು ಪತ್ರಾಗಾರ ಕೂಟ ಕಾರ್ಯಕ್ರಮ ಆಯೋಜಿಸಿ ವಿಚಾರ ಸಂಕಿರಣದ ಮೂಲಕ ಎಚ್ಚರಿಸುವ ಕೆಲಸ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಪಿ. ಪ್ರತಿಮಾ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಪ್ರಪಂಚದಿಂದ ಹೊರಬಂದು ಪಠ್ಯ ಚಟುವಟಿಕೆಗಳ ಜತೆಗೆ ಲೋಕಜ್ಞಾನವನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಪಟ್ಟಣದ ಕೆಪಿಎಸ್ ಶಾಲೆಯ ಪ್ರಾಂಶುಪಾಲ ಡಿ.ಬಿ.ಸತ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಮೋಹನ್, ಐಕ್ಯೂಎಸಿ ಸಂಚಾಲಕ ಮಧು, ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Deva
the authorDeva

Leave a Reply

error: Content is protected !!