NEWSನಮ್ಮರಾಜ್ಯಮೈಸೂರುಲೇಖನಗಳುಸಂಸ್ಕೃತಿ

ವಿಶ್ವವಿಖ್ಯಾತ ಮೈಸೂರು ದಸರಾ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ-ಕರ್ನಾಟಕದ ಹೆಮ್ಮೆ!

ವಿಜಯಪಥ ಸಮಗ್ರ ಸುದ್ದಿ

ಮೈಸೂರು ಮಲ್ಲಿಗೆ, ಅರಮನೆಗಳ ನಗರಿ, ಪಾರಂಪರಿಕ ಕಟ್ಟಡಗಳುಳ್ಳ ಸಾಂಸ್ಕೃತಿಕ ನಗರಿ ಎಂಬಿತ್ಯಾದಿಯಾಗಿ ವರ್ಣನೆಗೆ ನಿಲುಕಿ ವಿಶ್ವದಲ್ಲೇ ಚಿರ ಪರಿಚಿತವಾಗಿರುವ ಮೈಸೂರು ಈಗ ಪ್ರವಾಸಿಗರ ಕೇಂದ್ರ ಬಿಂದು.

ರಾಜರ ಆಳ್ವಿಕೆ ಕಾಲದಲ್ಲಿ ಪ್ರಾರಂಭವಾದ ನಾಡಹಬ್ಬ ನವರಾತ್ರಿ ಉತ್ಸವ ಎಂದು ಬಿಂಬಿತವಾದ ವಿಶ್ವವಿಖ್ಯಾತ ಮೈಸೂರು ದಸರಾ ಇಂದಿಗೂ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ ಮತ್ತು ಕರ್ನಾಟಕದ ವೈಭವವನ್ನು ಪ್ರಪಂಚದಾದ್ಯಂತ ಪಸರಿಸಲು ಸಾಕ್ಷಿಕರಿಸಿದಂತೆ.

ನಾಡ ಹಬ್ಬದ ಪ್ರಯುಕ್ತ ಮೈಸೂರು ನಗರವು ವಿದ್ಯುತ್ ಅಲಂಕಾರದಿಂದ ಶೃಂಗಾರಗೊಳ್ಳುವ ಸಿದ್ಧತೆ ಭರದಿಂದ ಸಾಗುತ್ತಿದೆ. ಪ್ರಮುಖವಾಗಿ ಮೈಸೂರು ಅರಮನೆ, ಕಲಾಮಂದಿರ ಭೂಮಿಗೀತ, ರಂಗಮಂದಿರ, ನಟನ ಮಂಟಪ, ದೇವರಾಜ ವಿವಿಧೋದ್ದೇಶ ಕ್ರೀಡಾಂಗಣ ಚಾಮುಡಿವಿಹಾರ ಕ್ರೀಡಾಂಗಣ, ವಸ್ತು ಪ್ರದರ್ಶನ ಅವರಣ, ಕರ್ಜನ್ ಪಾರ್ಕ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮಕ್ಕಳಿಂದ ವೃದ್ಧರವರೆವಿಗೂ ಲಿಂಗಬೇಧವಿಲ್ಲದೆ ಎಲ್ಲರೂ ಪಾಲ್ಗೊಂಡು, ಸಂಗೀತ, ಕ್ರೀಡೆ, ಫಲಪುಷ್ಪ ವೀಕ್ಷಣೆ, ಕುಸ್ತಿಯನ್ನು ನೋಡುವುದರ ಜೊತೆಗೆ ಅರಮನೆಯಲ್ಲಿ ಜಗಮಗಿಸುವ ವಿದ್ಯುತ್ ದೀಪಗಳ ಮೋಹಕ ಚಿತ್ತಾರದ ಬೆಳಕನ್ನು ಸವಿಯುವುದರಲ್ಲಿ ತಲ್ಲಿನರಾಗುವುದಕ್ಕೆ ದಿನಗಣನೆ ಶುರುವಾಗಿದೆ.

ಇನ್ನು ಈ ಎಲ್ಲವನ್ನು ನೋಡುವವರಿಗೆ ಸಮಯ ಜಾರುವುದೆ ಮರೆತು ಹೋಗುತ್ತದೆ. ಅಷ್ಟರ ಮಟ್ಟಿಗೆ ನಾಡಹಬ್ಬ ಜನ-ಮನ ಸೂರೆಗೊಂಡಿದೆ. ಗ್ರಾಮೀಣ ಸೊಗಡಿನ ಜಾನಪದ ಗೀತೆಗಳು ಮೇಲೈಸುವಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಚಲನ ಚಿತ್ರಗೀತೆಗಳು, ಆಹಾರ ಮೇಳದಲ್ಲಿ ಬಗೆಬಗೆಯ ತಿಂಡಿ- ತಿನಿಸುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತ ರಂಜಿಸಲಿವೆ.

ಅದರಲ್ಲೂ ಚಲನ ಚಿತ್ರಗೀತೆಗಳನ್ನು ಹಾಡುವುದಕೋಸ್ಕರವೇ ‘ಯುವ ದಸರಾ’ ಎಂಬ ನಾಮಾಂಕಿತದೊಂದಿಗೆ ತೆರೆಯಲಿರುವ ಈ ಕಾರ್ಯಕ್ರಮ ಯುವ ಹೆಂಗಳೆಯರ ಹೃದಯಗಳಲ್ಲಿ ನವ ಸಿಂಚನದ ಛಾಪು ಮೂಡಿಸಿ ಪ್ರೇಮಲೋಕಕ್ಕೆ ಕರೆದೊಯ್ದರೆ, ಕಲಾ ಮಂದಿರದಲ್ಲಿ ವಿವಿಧ ಜಾನಪದ ತಂಡಗಳಿಂದ ಮೈನವಿರೇಳಿಸುವ ವಿಶಿಷ್ಟ ಕಲೆಗಳ ಪ್ರದರ್ಶನ ಜರುಗುತ್ತವೆ.

ವಸ್ತು ಪ್ರದರ್ಶನ ಆವರಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಾಲಭವನ ಬನ್ನಿ ಮಂಟಪದಲ್ಲಿ ಚಲನಚಿತ್ರ ರಂಗದ ಮಹಾನ್ ವ್ಯಕ್ತಿಗಳ ಚಿತ್ರಪ್ರದರ್ಶನ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕವಿ ಕಾವ್ಯ ಪರಂಪರೆ, ಕಾಡಾ ಕಚೇರಿ ಆವರಣದಲ್ಲಿ ಆಹಾರ ಮೇಳ, ಭೂಮಿಗೀತ, ರಂಗಮಂದಿರದಲ್ಲಿ ನಾಟಕಗಳು, ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಗನ್ನೋಹನ ಅರಮನೆಯಲ್ಲಿ ರಂಗಗೀತೆಗಳು, ಪುರಭವನ, ನಟನ ರಂಗಮಂಟಪ ಹೀಗೆ ನಗರದ ಎಲ್ಲ ಪ್ರಮುಖ ಮಂದಿರಗಳು, ದೇವಾಲಯಗಳಲ್ಲೂ ನವ ರಾತ್ರಿಯ ಉತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತವೆ.

ನವ ರಾತ್ರಿಗಳು ಸಂಗೀತ ರಸದೌತಣದೊಂದಿಗೆ ಜಾರಿ ದಶ(ಹತ್ತನೆ) ದಿನದಂದು ಅಭಿಮನ್ಯು ಮೇಲೆ 750ಕೆಜಿಯ ಚಿನ್ನದ ಅಂಬಾರಿಯನ್ನಿಟ್ಟು ಅಂಬಾರಿಯಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿಯ ಪ್ರತಿಮೆಯನ್ನಿಟ್ಟು ಅರಮನೆಯಿಂದ ಬನ್ನಿ ಮಂಟಪದ ವರೆವಿಗೂ ಅಭಿಮನ್ಯು ಗಂಭೀರವಾಗಿ ನಯನ ಮನೋಹರವಾದ ಅಡಿಯಿಡುತ್ತ ಸಾಗುತ್ತಿದ್ದರೆ ಪ್ರೇಕ್ಷಕರ ಮನಸ್ಸು ಕೆಲಕ್ಷಣ ‘ನಾನು ಅಂಬಾರಿಯ ಮೇಲೆ ಕುಳಿತು ಹೊರಟ್ಟಿದ್ದೇನೆ ಎಂಬಂತಹ ಕಲ್ಪನಾ ಲೋಕದಲ್ಲಿ ತೇಲಿ ಮಿಂಚಿನಂತೆ ಮಾಯವಾಗದಿರದು.

ಅಭಿಮನ್ಯು ಗಾಂಭೀರದ ನಡಿಗೆಯಲ್ಲಿ ಚಿನ್ನದ ಅಂಬಾರಿಯನ್ನು ತನ್ನ ಬೆನ್ನ ಮೇಲೆ ಹೊತ್ತು ಬರುತ್ತಿರುವುದನ್ನು ವೀಕ್ಷಿಸಲೆಂದೇ ಸಾವಿರಾರು ಮೈಲಿಗಳಿಂದ ದೇಶ- ವಿದೇಶಿಗರು ಆಗಮಿಸುತ್ತಾರೆ. ಅಷ್ಟೆಯಲ್ಲ ನಮ್ಮ ನಾಡಿನಲ್ಲಿ ಜರುಗುವ ಈ ದಸರಾ ಉತ್ಸವವನ್ನು ತಮ್ಮ ತಾಯ್ನಾಡಿನ ಪತ್ರಿಕೆಗಳಲ್ಲಿ ತಮ್ಮದೇ ಶೈಲಿಯಲ್ಲಿ ಬರೆದು ಹಾಡಿ ಹೊಗಳುವುದು ಮೈಸೂರು ದಸರಾದ ಸಂಭ್ರಮಾಚರಣೆಗೆ ಹಿಡಿದ ಕನ್ನಡಿ.

ಪ್ರವಾಸಿಗರ ಬರವಣಿಗೆಯಿಂದ ಪುಳಕಿತರಾಗಿ ಆಕರ್ಷಿತರಾದ ವಿದೇಶಿಯರು ಒಮ್ಮೆಯಾದರು ಮೈಸೂರು ದಸರಾ ನೋಡಬೇಕೆಂಬ ಆಶಯ ವ್ಯಕ್ತಪಡಿಸದೆ ಇರರು. – ದೇವರಾಜು ಬೀಡನಹಳ್ಳಿ

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ