‘ಅಂತ್ಯವಾಯ್ತು’ ಕಿರುಚಿತ್ರ ತಂಡದ ಮೂವರು ಕಟ್ಟಡ ಕುಸಿದು ಸಾವು, ಮತ್ತಿಬ್ಬರಿಗೆ ಗಾಯ
ಮೃತಪಟ್ಟ ವಿದ್ಯಾರ್ಥಿಗಳ ತಂಡವು ಇತ್ತೀಚೆಗಷ್ಟೇ 'ಅಂತ್ಯವಾಯ್ತು' ಹೆಸರಿನ ಕಿರುಚಿತ್ರವೊಂದನ್ನು (Short Film) ನಿರ್ಮಿಸಿತ್ತು. ಭಾನುವಾರ ರಾತ್ರಿ ಈ ಕಿರುಚಿತ್ರದ ಪ್ರಚಾರದ ಪೋಸ್ಟರ್ಗಳನ್ನು ಕಟ್ಟಡದ ಗೋಡೆಗೆ ಅಂಟಿಸಲು ಇವರೆಲ್ಲರೂ ಅಲ್ಲಿಗೆ ತೆರಳಿದ್ದರು. ಅದೇ ಕಟ್ಟಡದ ಮೇಲ್ಭಾಗದಲ್ಲಿದ್ದ ಫೋಟೋ ಸ್ಟುಡಿಯೋ ಮಾಲೀಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಅವರು ನಿರ್ಮಿಸಿದ ಚಿತ್ರದ ಶೀರ್ಷಿಕೆಯಂತೆಯೇ ಬದುಕು ಕೂಡ ಅಂತ್ಯವಾಗಿರುವುದು ಭಾರಿ ದುಃಖ ತಂದಿದೆ.

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪವಿರುವ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗದ ಮೊದಲ ಅಂತಸ್ತಿನ ಸಿಮೆಂಟ್ ಚಾವಣಿ (ಸಜ್ಜಾ) ಕುಸಿದು ಬಿದ್ದಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಈ ಹೃದಯವಿದ್ರಾವಕ ಘಟನೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವಿದ್ಯಾರ್ಥಿಗಳು ದೇವದುರ್ಗದ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.
ದೇವದುರ್ಗ ತಾಲೂಕಿನ ಕ್ಯಾದಿಗೆರಾ ಗ್ರಾಮದ ನಾಗರಾಜ್ (21), ಸಮುದ್ರ ಗ್ರಾಮದ ರವಿಕುಮಾರ್ (22) ಹಾಗೂ ಕೊತ್ತಿಗುಡ್ಡ ಗ್ರಾಮದ ಅರ್ಜುನ್ (21) ಮೃತ ವಿದ್ಯಾರ್ಥಿಗಳು. ಅವರಲ್ಲಿ ನಾಗರಾಜ್ ಮತ್ತು ರವಿಕುಮಾರ್ ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ಗಾಯಗೊಂಡಿರುವ ಉಳಿದ ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ ವಿದ್ಯಾರ್ಥಿಗಳ ತಂಡವು ಇತ್ತೀಚೆಗಷ್ಟೇ ‘ಅಂತ್ಯವಾಯ್ತು’ ಹೆಸರಿನ ಕಿರುಚಿತ್ರವೊಂದನ್ನು (Short Film) ನಿರ್ಮಿಸಿತ್ತು. ಭಾನುವಾರ ರಾತ್ರಿ ಈ ಕಿರುಚಿತ್ರದ ಪ್ರಚಾರದ ಪೋಸ್ಟರ್ಗಳನ್ನು ಕಟ್ಟಡದ ಗೋಡೆಗೆ ಅಂಟಿಸಲು ಇವರೆಲ್ಲರೂ ಅಲ್ಲಿಗೆ ತೆರಳಿದ್ದರು. ಅದೇ ಕಟ್ಟಡದ ಮೇಲ್ಭಾಗದಲ್ಲಿದ್ದ ಫೋಟೋ ಸ್ಟುಡಿಯೋ ಮಾಲೀಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಅವರು ನಿರ್ಮಿಸಿದ ಚಿತ್ರದ ಶೀರ್ಷಿಕೆಯಂತೆಯೇ ಬದುಕು ಕೂಡ ಅಂತ್ಯವಾಗಿರುವುದು ಭಾರಿ ದುಃಖ ತಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್, ಪುರಸಭೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು.
ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಾಣಿಜ್ಯ ಸಂಕೀರ್ಣದ ಮಾಲೀಕರ ಬೇಜವಾಬ್ದಾರಿತನ ಹಾಗೂ ಕಳಪೆ ನಿರ್ವಹಣೆಯೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಠಿಣ ಕ್ರಮ ಹಾಗೂ ಪರಿಹಾರಕ್ಕೆ ಆಗ್ರಹ: ದುರಂತದ ಕುರಿತು ಆಘಾತ ವ್ಯಕ್ತಪಡಿಸಿರುವ ಶಾಸಕಿ ಕರೆಮ್ಮ ನಾಯಕ್, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ವಿವಿಧ ಸಂಘಟನೆಗಳು ಮೃತಪಟ್ಟ ಬಡ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿವೆ.
ತನಿಖೆ ಆರಂಭಿಸಿದ ಪೊಲೀಸರು: ಈ ಘಟನೆಗೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಗು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಹಳೆಯದಾದ ಮತ್ತು ನಿಯಮ ಬಾಹಿರವಾಗಿ ಸಜ್ಜಾ ವಿಸ್ತರಿಸಿದ್ದ ಕಟ್ಟಡದ ಸ್ಥಿರತೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮುಂಗಾರು ಮಳೆಯ ಆರಂಭದ ಸಮಯದಲ್ಲಿ ಇಂತಹ ಅಪಾಯಕಾರಿ ವಾಣಿಜ್ಯ ಸಂಕೀರ್ಣಗಳ ಸುರಕ್ಷತಾ ಬಗ್ಗೆ ಗಮನಹರಿಸದಿರುವ ನಗರ ಸಂಸ್ಥೆಗಳ ನಿರ್ಲಕ್ಷ್ಯದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.







