KSRTC: ಬೆಂಗಳೂರು ಚಲೋ- ಫ್ರೀಡಂ ಪಾರ್ಕ್ನಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿರುವ ನೌಕರರು ಬಸ್ ನಿಲ್ಲಿಸಲು ಚಿಂತನೆ
ಬೆಂಗಳೂರು: 2020ರ ಜನವರಿ 1ರಿಂದ -2023ರ ಫೆ.28ರವರೆಗಿನ 38 ತಿಂಗಳ ಹಿಂಬಾಕಿ ಸೇರಿದಂತೆ ಒಟ್ಟಾರೆ 63 ತಿಂಗಳ ವೇತನ ಹಿಂಬಾಕಿಗೆ ಆಗ್ರಹಿಸುವ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಾಳೆ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಒಂದು ವೇಳೆ ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಇಂದು ಸಂಜೆಯಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ಡಬ್ಲ್ಯುಕೆಅರ್ಟಿಸಿ ಬಸ್ಗಳ ಸಂಚಾರ ಬಂದ್ ಮಾಡಿ ಮುಷ್ಕರ ಮಾಡಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ನೌಕರರು ಇಂದು ಫ್ರೀಡಂಪಾರ್ಕ್ನಲ್ಲಿ ಹಮ್ಮಿಕೊಂಡಿರುವ ‘ಬೆಂಗಳೂರು ಚಲೋ’ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದು ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಿದ್ದಾರೆ. ಅಲ್ಲದೆ ಸಂಜೆ 4 ಗಂಟೆವರೆಗೆ ಸರ್ಕಾರಕ್ಕೆ ಡೆಡ್ಲೈನ್ ನೀಡಲಾಗಿದ್ದು, ಬೇಡಿಕೆ ಸಂಬಂಧ ನಿರ್ಣಯ ಕೈಗೊಳ್ಳದಿದ್ದರೆ ಬಸ್ಗಳನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಸಂಬಂಧ ನಿನ್ನೆ ರಾತ್ರಿಯೇ ಸರ್ಕಾರ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಬದಲಿಗೆ 26 ತಿಂಗಳ ಹಿಂಬಾಕಿ ಬಿಡುಗಡೆ ಮಾಡುವುದಾಗಿ ಆದೇಶ ಹೊರಡಿಸಿದೆ. ಆದರೆ, ಇದನ್ನು ಒಪ್ಪದ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದು 2020ರ ಬಳಿಕ ನಿವೃತ್ತರಾಗಿರುವ ನೌಕರರು ಸೇರಿದಂತೆ ನೂರಾರು ನೌಕರರು ಚಲೋದಲ್ಲಿ ಭಾಗಿಯಾಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ.
ಈ ನಡುವೆ ಈಗ ಸರ್ಕಾರ ಸ್ಪಂದಿಸದಿದ್ದರೆ ಸಂಜೆ ಬಳಿಕ ಬಸ್ ಸಂಚಾರ ಸ್ಥಗಿತವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಸ್ಪಂದನೆ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
ಒಟ್ಟಾರೆ ಸಾರಿಗೆ ಅಧಿಕಾರಿಗಳು/ನೌಕರರಿಗೆ 2020 ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಮತ್ತೆ 27 ತಿಂಗಳ ಹಿಂಬಾಕಿ ಸೇರಿದರೆ 63 ತಿಂಗಳ ಅಂದರೆ 5ವರ್ಷ 3 ತಿಂಗಳ ಹಿಂಬಾಕಿ ಕೊಡಬೇಕಿದೆ. ಆದರೆ ಈ ಬಗ್ಗೆ ಸರ್ಕಾರ ಮೌನವಹಿಸಿರುವುದರಿಂದ ಹಾಗೂ ನೌಕರರ ಕೂಗಿಗೆ ಸ್ಪಂದಿಸರಿರುವುದಕ್ಕೆ ಇಂದು ರೊಚ್ಚಿಗೆದ್ದು ಹೋರಾಟದ ಹಾದಿ ಹೊಡಿದಿದ್ದಾರೆ ನಾಲ್ಕೂ ನಿಗಮಗಳ ನೌಕರರು.
Related











