ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್ ಬಿಎಂಎಸ್
01/01/2020ರಿಂದ ಬಾಕಿ ಇರುವ 38 ತಿಂಗಳ ಅರಿಯರ್ಸ್ ಇಂದಿಗೂ ಸಂಪೂರ್ಣವಾಗಿ ಪಾವತಿಯಾಗಿಲ್ಲ. 12/05/2026ರಂದು ಕೇವಲ ಒಂದು ಕಂತಿನ ಹಣ ನೀಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಲು ಸಾಧ್ಯವಿಲ್ಲ. ಜತೆಗೆ ಮುಂದಿನ ವೇತನ ಪರಿಷ್ಕರಣೆ 01/01/2024ರಿಂದ ಜಾರಿಯಾಗಬೇಕಾಗಿದ್ದರೂ, ಅದನ್ನು ಅನ್ಯಾಯಕರವಾಗಿ 01/04/2025ರಿಂದ ಜಾರಿಗೆ ತರಲು ಮುಂದಾಗಿರುವುದು ನೌಕರರ ಹಕ್ಕಿನ ಮೇಲೆ ನಡೆಸುತ್ತಿರುವ ಸ್ಪಷ್ಟ ದಾಳಿ.

ಬೀದರ್: ರಾಜ್ಯ ಸರ್ಕಾರವು ಸಾರಿಗೆ ನೌಕರರ ವೇತನ ಪರಿಷ್ಕರಣೆ ವಿಷಯದಲ್ಲಿ ಏಕಪಕ್ಷೀಯ ಹಾಗೂ ನೌಕರ ವಿರೋಧಿ ನಿರ್ಧಾರ ಕೈಗೊಂಡಿರುವುದನ್ನು ಭಾರತೀಯ ಮಜದೂರ್ ಸಂಘ – ಬೀದರ್ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.

ಸಾರಿಗೆ ನೌಕರರ ಅನೇಕ ವರ್ಷಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಕಡೆಗಣಿಸಿ ಸರ್ಕಾರ ನಡೆದುಕೊಳ್ಳುತ್ತಿರುವುದು ನೌಕರ ವರ್ಗದ ಮೇಲೆ ನಡೆಯುತ್ತಿರುವ ಮಹಾ ಅನ್ಯಾಯದ ಸ್ಪಷ್ಟ ಉದಾಹರಣೆಯಾಗಿದೆ.
01/01/2020ರಿಂದ ಬಾಕಿ ಇರುವ 38 ತಿಂಗಳ ಅರಿಯರ್ಸ್ ಇಂದಿಗೂ ಸಂಪೂರ್ಣವಾಗಿ ಪಾವತಿಯಾಗಿಲ್ಲ. 12/05/2026ರಂದು ಕೇವಲ ಒಂದು ಕಂತಿನ ಹಣ ನೀಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಲು ಸಾಧ್ಯವಿಲ್ಲ. ಜತೆಗೆ ಮುಂದಿನ ವೇತನ ಪರಿಷ್ಕರಣೆ 01/01/2024ರಿಂದ ಜಾರಿಯಾಗಬೇಕಾಗಿದ್ದರೂ, ಅದನ್ನು ಅನ್ಯಾಯಕರವಾಗಿ 01/04/2025ರಿಂದ ಜಾರಿಗೆ ತರಲು ಮುಂದಾಗಿರುವುದು ನೌಕರರ ಹಕ್ಕಿನ ಮೇಲೆ ನಡೆಸುತ್ತಿರುವ ಸ್ಪಷ್ಟ ದಾಳಿ.
ಪ್ರಸ್ತುತ 15 ತಿಂಗಳು ಹಾಗೂ ಮುಂದಿನ 15 ತಿಂಗಳು ಸೇರಿ ಒಟ್ಟು 30 ತಿಂಗಳ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ — ಇದು ನೌಕರರ ಬದುಕಿನ ಮೇಲೆ ಬಿದ್ದಿರುವ ಮರಣ ಶಾಸನ!.
ನೌಕರರ ಕುಟುಂಬ, ಮಕ್ಕಳ ಶಿಕ್ಷಣ, ಆರೋಗ್ಯ, ಜೀವನ ಭದ್ರತೆ ಹಾಗೂ ಭವಿಷ್ಯದ ಮೇಲೆ ಸರ್ಕಾರ ಭಾರೀ ಹೊಡೆತ ನೀಡುತ್ತಿದೆ. ನೌಕರರ ಒಂದು ಗಂಟೆಯ ವೇತನವಾಗಲಿ, ಅರಿಯರ್ಸ್ ಆಗಲಿ, ವೇತನ ಪರಿಷ್ಕರಣೆಯಾಗಲಿ, ಅದು ಕಾರ್ಮಿಕರ ಮೈ ಬೆವರಿನ ದುಡ್ಡು. ಅದನ್ನು ತಡೆದು ಇಡುವ ಯಾವುದೇ ನೈತಿಕ ಹಕ್ಕು ಸರ್ಕಾರಕ್ಕೆ ಇಲ್ಲ.
ಭಾರತೀಯ ಮಜದೂರ್ ಸಂಘದ ಸ್ಪಷ್ಟ ಆಗ್ರಹ:
38 ತಿಂಗಳ ಎಲ್ಲಾ ಬಾಕಿ ಅರಿಯರ್ಸ್ ಕೂಡಲೇ ಪಾವತಿಸಬೇಕು. 01/01/2024ರಿಂದಲೇ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು. ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ಸಮಾನ ವೇತನ ವ್ಯವಸ್ಥೆ ಜಾರಿಗೆ ತರಬೇಕು.
ನೌಕರರ ಬದುಕಿನ ಪ್ರಶ್ನೆಯನ್ನು ರಾಜಕೀಯ ಅಥವಾ ಹಣಕಾಸಿನ ನೆಪದಲ್ಲಿ ನಿರ್ಲಕ್ಷಿಸಬಾರದು. ಇನ್ನೊಂದು ವಿಷಾದನೀಯ ಸಂಗತಿ ಏನೆಂದರೆ, ಮಾತುಕತೆಗಳಿಗೆ ಹೋಗುವ ಕೆಲವು ಸಂಘಟನೆಗಳ ಅನೇಕ ನಾಯಕರು ಸಂಸ್ಥೆಯ ನೈಜ ಸಿಬ್ಬಂದಿಯೇ ಅಲ್ಲ. ಕೆಲವರು ವಜಾಗೊಂಡವರು, ಕೆಲವರು ಉಚ್ಚಾಟನೆಗೊಂಡವರು, ಇನ್ನೂ ಕೆಲವರು ಟ್ರಾನ್ಸ್ಫರ್ ಮತ್ತು ಕಮರ್ಷಿಯಲ್ ವ್ಯವಹಾರಗಳಲ್ಲಿ ತೊಡಗಿರುವವರು.
ಆದರೆ ನಿಜವಾದ ನೌಕರರ ದಿನನಿತ್ಯದ ಸಂಕಷ್ಟಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇಂದು ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಶಿಕ್ಷಣ, ಕುಟುಂಬದ ವೈದ್ಯಕೀಯ ವೆಚ್ಚ, ದಿನಸಿ, ಬಟ್ಟೆ, ಹಾಲು, ಹಣ್ಣು ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಈ ನಿಜವಾದ ಸಮಸ್ಯೆಗಳ ಬಗ್ಗೆ ಮಾತಾಡಬೇಕಾದ ನಾಯಕತ್ವ ಮೌನವಾಗಿದೆ.
ಎಲ್ಲ ಸಂಘಟನೆಗಳ ಮುಖಂಡರು ಕಾರ್ಮಿಕರ ನೈಜ ಬದುಕಿನ ನೋವನ್ನು ಅರ್ಥಮಾಡಿಕೊಳ್ಳಬೇಕು.
ಇತಿಹಾಸ ಸಾಕ್ಷಿಯಾಗಿದೆ. ನೌಕರರ ಕಣ್ಣೀರಿನ ಮೇಲೆ ನಿಂತ ಸರ್ಕಾರಗಳು ದೀರ್ಘಕಾಲ ಉಳಿದ ಉದಾಹರಣೆಗಳಿಲ್ಲ.
ಮೈ ಬೆವರಿನಿಂದ ದುಡಿಯುವ ವರ್ಗದ ಸಹನೆಗೂ ಮಿತಿ ಇದೆ. ಅನ್ಯಾಯ ಹೆಚ್ಚಾದಾಗ ಹೋರಾಟ ಅನಿವಾರ್ಯವಾಗುತ್ತದೆ. ನೌಕರರ ಗೌರವ ಉಳಿದರೆ ಮಾತ್ರ ಸಂಸ್ಥೆಗಳ ಗೌರವ ಉಳಿಯುತ್ತದೆ.” “ಹಕ್ಕು ಕೊಟ್ಟರೆ ಸೇವೆ, ಅನ್ಯಾಯ ಮಾಡಿದರೆ ಹೋರಾಟ ಎಂದು ಬಿಎಂಎಸ್ ಸ್ಪಷ್ಟವಾಗಿ ಹೇಳಿದೆ.
Related









