BMTC “ವಜ್ರ ವಿಸ್ತಾರ” ಬಸ್ಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ, ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ- ಸಿಟಿಎಂ ಆದೇಶ
ಮೇ 25ರಂದು ಆದೇಶ ಹೊರಡಿಸಿರುವ ಮುಖ್ಯ ಸಂಚಾರ ವ್ಯವಸ್ಥಾಪಕರು, ಈ ಆದೇಶ 01.06.2026 ರಿಂದ ಜಾರಿಗೆ ಬರಲಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಮನಗರ ಮತ್ತು ಕನಕಪುರಕ್ಕೆ ವಜ್ರ ವೇಗದೂತ ಸೇವೆಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಸೇವೆಗಳಿಗೆ "ವಜ್ರ ವಿಸ್ತಾರ" ಸೇವೆ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಜ್ರ ವಿಸ್ತಾರ ಸೇವೆಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ ದರದಲ್ಲಿ ಚೀಟಿ ವಿತರಿಸಬೇಕು ಮತ್ತು ಹಿರಿಯ ನಾಗರಿಕರಿಗೆ ಪೂರ್ಣ ಪ್ರಮಾಣದ ಚೀಟಿ ವಿತರಣೆ ಮಾಡಬೇಕು ಇವರಿಗೆ ಯಾವುದೇ ರಿಯಾಯಿತಿ ಇಲ್ಲ ಎಂಬ ಬಗ್ಗೆ ನಿರ್ವಾಹಕರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.

ಈ ಸಂಬಂಧ ನಿನ್ನೆ ಮೇ 25ರಂದು ಆದೇಶ ಹೊರಡಿಸಿರುವ ಮುಖ್ಯ ಸಂಚಾರ ವ್ಯವಸ್ಥಾಪಕರು, ಈ ಆದೇಶ 01.06.2026 ರಿಂದ ಜಾರಿಗೆ ಬರಲಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಮನಗರ ಮತ್ತು ಕನಕಪುರಕ್ಕೆ ವಜ್ರ ವೇಗದೂತ ಸೇವೆಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಸೇವೆಗಳಿಗೆ “ವಜ್ರ ವಿಸ್ತಾರ” ಸೇವೆ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಸ್ತುತ ವಜ್ರ ವಿಸ್ತಾರ ಸೇವೆಗಳನ್ನು ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮತ್ತು ತುಮಕೂರು ಪ್ರದೇಶಗಳಿಗೂ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಾಗಿ ಈ ವಜ್ರ ವಿಸ್ತಾರ ಸೇವೆಗಳಲ್ಲಿ ಮಕ್ಕಳ ರಿಯಾಯಿತಿ ಚೀಟಿ ಹಾಗೂ ಹಿರಿಯ ನಾಗರಿಕರ ಚೀಟಿಗಳನ್ನು ವಿತರಣೆ ಮಾಡುವುದಕ್ಕೆ ಈ ಕೆಳಗಿನಂತೆ ಸೂಚನೆ ನೀಡಲಾಗಿದೆ ಎಂದು ಸಿಟಿಎಂ ತಿಳಿಸಿದ್ದಾರೆ.
ಮೊದಲನೆಯದಾಗಿ ವಜ್ರ ವಿಸ್ತಾರ ಸೇವೆಗಳಲ್ಲಿ ಮಕ್ಕಳಿಗೆ (6 ರಿಂದ 12 ವರ್ಷ) ವಯಸ್ಕರ ಪ್ರಯಾಣ ದರದಲ್ಲಿ ಶೇ.25 ರಷ್ಟು ರಿಯಾಯಿತಿ ಕಲ್ಪಿಸಬೇಕು. ಇನ್ನು ಹಿರಿಯ ನಾಗರಿಕರಿಗೆ ವಯಸ್ಕರಂತೆ ಪೂರ್ಣ ಪ್ರಮಾಣದ ಚೀಟಿ ದರಗಳನ್ನು ವಿತರಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇನ್ನು ಬೆಂಗಳೂರು-ತುಮಕೂರು ವಜ್ರ ವಿಸ್ತಾರ ಸೇವೆಗಳಲ್ಲಿ ಯಾವುದೇ ಪಾಸುಗಳು (ಹಾಲಿ/ಮಾಜಿ ವಿಧಾನಸಭಾ /ವಿಧಾನಪರಿಷತ್ತು ಪಾಸುಗಳನ್ನು ಹೊರತುಪಡಿಸಿ) ಮಾನ್ಯ ಇರುವುದಿಲ್ಲ. ಮುಂದುವರಿದು, ವಜ್ರ ವೇಗದೂತ (ವಿಸ್ತಾರ) ಪಾಸುದಾರರು ಹೆಚ್ಚುವರಿ ಚೀಟಿ ಪಡೆದು ವಾಯುವಜ್ರ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು, ಈ ಆದೇಶವು ವಜ್ರ ವಿಸ್ತಾರ ಮಾಸಿಕ ಪಾಸುದಾರರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ವಿವರಿಸಿದ್ದಾರೆ.
ಅಲ್ಲದೆ ಈ ಸುತ್ತೋಲೆಯಲ್ಲಿನ ಎಲ್ಲ ಅಂಶಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ, ಬಸ್ ನಿಲ್ದಾಣದ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಬಸ್ ನಿಲ್ದಾಣ, ಘಟಕಗಳ ಸೂಚನಾ ಫಲಕಗಳ ಪ್ರಕಟಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು/ ಘಟಕ ವ್ಯವಸ್ಥಾಪಕರು/ ಬಸ್ ನಿಲ್ದಾಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು ಈ ಸುತ್ತೋಲೆಯು 01.06.2026 ರಿಂದ ಜಾರಿಗೆ ಬರುತ್ತದೆ. ಸುತ್ತೋಲೆಯನ್ನು ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಜಾರಿಗೊಳಿಸಿದ್ದಕ್ಕೆ ಅನುಸರಣಾ ವರದಿಯನ್ನು ತಪ್ಪದೇ ಕಳುಹಿಸುವುದು ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
Related









