ನಾಳೆ ಕನಿಷ್ಠ ಪಿಂಚಣಿ 7,500 ರೂ. ಮಾಡಲು ಆಗ್ರಹಿಸಿ ಪಿಎಫ್ ಕಚೇರಿ ಮುಂದೆ EPS-95, BMTC-KSRTC ನಿವೃತ್ತ ನೌಕರರ ಪ್ರತಿಭಟನೆ
ಇಪಿಎಸ್ ಪಿಂಚಣಿದಾರರ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ ರೂ 1,000/- ದಿಂದ 7,500/- + ಭತ್ಯೆ ಸೇರಿ ಹೆಚ್ಚಳ ಮಾಡುವುದರಿಂದ ಸರಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಇನ್ನೂ 82 ಲಕ್ಷ ಇಪಿಎಸ್ ನಿವೃತ್ತರಿಂದ ಸಂಗ್ರಹಿಸಿದ ಹಣದಲ್ಲಿ, ಅನ್ ಕ್ಲೇಮ್ಡ್ ಕಾರ್ಪಸ್ ಮೊತ್ತ ಸುಮಾರು 95 ಸಾವಿರ ಕೋಟಿ ಇದ್ದು, ಇದನ್ನು ವಿನಿಯೋಗಿಸಿದರೆ ಯಾವುದೇ ಹಣಕಾಸಿನ ಕೊರತೆ ಉಂಟಾಗುವುದಿಲ್ಲ- ನಂಜುಂಡೇಗೌಡ

ಬೆಂಗಳೂರು: ಇಪಿಎಸ್ ಪಿಂಚಣಿದಾರರ 41ನೇ ಪ್ರತಿಭಟನೆಯಲ್ಲಿ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ ನಾಳೆ ಮೇ 27ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಳ್ಳನ್ನು ಎಷ್ಟು ಬಾರಿ ಹೇಳಿದರೂ ಅದು ಸತ್ಯ ಆಗುವುದಿಲ್ಲ. ಇದನ್ನೇ ಇಪಿಎಫ್ಒ ಅಧಿಕಾರಿಗಳು ಕಳೆದೊಂದು ದಶಕದಿಂದ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುತ್ತಾ, ಇಪಿಎಸ್ ನಿವೃತ್ತರನ್ನು ವಂಚಿಸುತ್ತಾ ಬಂದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಇದ್ಯಾವುದಕ್ಕೂ ಇಪಿಎಸ್ ನಿವೃತ್ತರು ಧೃತಿಗೆಡಲಿಲ್ಲ. ದೇಶಾದ್ಯಂತ ಹಲವಾರು ಮುಖಂಡರು ಇಪಿಎಸ್ ಸಂಘಟನೆಗಳನ್ನು ಸ್ಥಾಪಿಸಿ, ನಿವೃತ್ತರಲ್ಲಿ ಹರಿವು ಮತ್ತು ಜಾಗೃತಿ ಮೂಡಿಸಿ, ಶಾಂತಿಯುತ ಹಾಗೂ ಕಾನೂನಾತ್ಮಕವಾಗಿ ನಡೆಸಿದ ಹೋರಾಟದ ಪರಿಣಾಮ, ವಿವಾದ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ನಮ್ಮ ರಾಜ್ಯದ ಉಚ್ಚ ನ್ಯಾಯಾಲಯವು ಸೇರಿದಂತೆ ದೇಶದ ವಿವಿಧ ರಾಜ್ಯ ಉಚ್ಚ ನ್ಯಾಯಾಲಯಗಳು, ಅಧಿಕಾರಿಗಳು ಹೊರಡಿಸಿದ್ದ, ಕಚೇರಿ ಆದೇಶಗಳು, ಕೆಲವೊಂದು ಸುತ್ತುವಲೆಗಳನ್ನು ಬದಿಗಿರಿಸಿ, ಇಪಿಎಸ್ ನಿವೃತ್ತರು ಸಲ್ಲಿಸಿರುವ ಜಂಟಿ ಆಯ್ಕೆ ಪತ್ರಗಳನ್ನು ಕಾನೂನು ಬದ್ಧವಾಗಿ ಪರಿಗಣಿಸಿ, ತೀರ್ಮಾನಿಸಬೇಕೆಂದು ಆದೇಶಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಸಂಸ್ಥೆಯ ನೌಕರರು ತಮ್ಮ ಬದುಕಿಗಾಗಿ ನಡೆಸಿದಷ್ಟು ಹೋರಾಟವನ್ನು ಬೇರೆ ಯಾವುದೇ ಕಂಪನಿ ಕಾರ್ಖಾನೆಯ ಉದ್ಯೋಗಿಗಳು ನಡೆಸಿಲ್ಲ, ಏಕೆಂದರೆ?. ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸಂಸ್ಥೆಯ ನೌಕರರು ಕೆಲಸದೂತ್ತಡಕ್ಕೆ ಒಳಗಾಗುತ್ತಿದ್ದು, ಚಾಲನಾ ಸಿಬ್ಬಂದಿಯ ಚಾಲನಾ ಜವಾಬ್ದಾರಿ, ಸಾರ್ವಜನಿಕ ಒಡನಾಟ, ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಇನ್ನು ಇವೆಲ್ಲವೂ ಜನರ ವಿಮರ್ಶೆಗೆ ಒಳಪಡುತ್ತವೆ. ಸಾರ್ವಜನಿಕರ ದೃಷ್ಟಿಯಲ್ಲಿ ನೌಕರರು ಸರ್ಕಾರಿ ಸೇವೆಯಲ್ಲಿರುವಂತೆ ಕಂಡುಬಂದರೂ, ಸಂಸ್ಥೆಯಲ್ಲಿ ನೌಕರನಿಗೆ ತನ್ನ ದುಡಿಮೆಗೆ ತಕ್ಕ ಪ್ರತಿಫಲವಿಲ್ಲ!!!. ನೌಕರನು ಸೇವೆಯಲ್ಲಿರಲಿ ಅಥವಾ ನಿವೃತ್ತನಾಗಿರಲಿ, ತನ್ನ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವವರು ಬೇರೆ ಯಾರು ಅಲ್ಲ, ಕೇಂದ್ರಸರ್ಕಾರ, ರಾಜ್ಯ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳು ಎಂದರೆ ತಪ್ಪಾಗಲಾರದು ಎಂದು ಹೇಳಿದ್ದಾರೆ.
ಇಪಿಎಸ್ ಪಿಂಚಣಿದಾರರ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ ರೂ 1,000/- ದಿಂದ 7,500/- + ಭತ್ಯೆ ಸೇರಿ ಹೆಚ್ಚಳ ಮಾಡುವುದರಿಂದ ಸರಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಇನ್ನೂ 82 ಲಕ್ಷ ಇಪಿಎಸ್ ನಿವೃತ್ತರಿಂದ ಸಂಗ್ರಹಿಸಿದ ಹಣದಲ್ಲಿ, ಅನ್ ಕ್ಲೇಮ್ಡ್ ಕಾರ್ಪಸ್ ಮೊತ್ತ ಸುಮಾರು 95 ಸಾವಿರ ಕೋಟಿ ಇದ್ದು, ಇದನ್ನು ವಿನಿಯೋಗಿಸಿದರೆ ಯಾವುದೇ ಹಣಕಾಸಿನ ಕೊರತೆ ಉಂಟಾಗುವುದಿಲ್ಲ.
ಆದರೆ ಜನ ಪ್ರತಿನಿಧಿಗಳಿಗೆ ಇಪಿಎಸ್ ನಿವೃತ್ತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವರುಗಳಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆಯೇ ಹೊರತು ನಿವೃತ್ತರ ಬಗ್ಗೆ ಕಿಂಚಿತ್ತು ಅಭಿಮಾನವಿಲ್ಲ. ಆದರೆ ಜೀವನ ಪಯಣದಲ್ಲಿ ನಮಗೆ ಇನ್ನೂ ಗೆಲುವು ಸಿಗಲಿಲ್ಲ, ಎಂದು ಚಿಂತಿಸುವುದು ಬೇಡ. ನಿವೃತ್ತರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೆ ಎಂದು ಹೇಳಲು ಬರುವುದಿಲ್ಲ.”ಕಾಲಾಯ ತಸ್ಮೈಯ್ ನಮಃ”. ಸಮಯವೇ ಎಲ್ಲವನ್ನು ನಿರ್ಧರಿಸುತ್ತದೆ. ತಾಳ್ಮೆಯೇ ಪ್ರಬಲ ಅಸ್ತ್ರ.
ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿರುವ, ಇಪಿಎಸ್ ನಿವೃತ್ತರ ಪ್ರತಿಭಟನೆಐ ಕೂಗು ದೆಹಲಿಗೆ ತಲಪಬೇಕು. ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರು, ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲಾ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಅಧಿಕಾರಿಗಳು ಮುಖಂಡರಿಗೆ ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು?. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗುವುದು.
ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮೇ 27ರ ಬುಧವಾರ ಬೆಳಗ್ಗೆ 10:30 ಗಂಟೆಗೆ ಪ್ರತಿಭಟನೆಯನ್ನು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಈ ವೇಳೆ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಹೀಗಾಘಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ಮನವಿ ಮಾಡಿದ್ದಾರೆ.
Related









