- ವಿಜಯಪಥ ಸಮಗ್ರ ಸುದ್ದಿ
ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಸರ ಕಿತ್ತು ಪರಾರಿಯಾಗ್ತಿದ್ದ ಕಳ್ಳ ಸಹೋದರರಿಬ್ಬರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಹೊಲಕ್ಕೆ ಹೋಗುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಅಣ್ಣ-ತಮ್ಮಂದಿರಾದ ನೆಲಮಂಗಲ ಮಾರುತಿ ನಗರದ ಅಶೋಕ್ ಸಿ. ಮತ್ತು ವಿನೋದ್ ಹೇರ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಈ ಇಬ್ಬರು ಮಾಡೋ ಕೆಲಸ ಬಿಟ್ಟು ಸರಗಳ್ಳತನಕ್ಕೆ ಇಳಿದಿದ್ದರು.
ತಾಲೂಕಿನ ಬಂಡಯ್ಯನಪಾಳ್ಯ ಗ್ರಾಮದ ನಿವಾಸಿ ಮುತ್ತಮ್ಮ ತಮ್ಮ ಜಮೀನಿಗೆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ವೇಳೆ ಪಲ್ಸರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಆಕೆಗೆ ಮಾರಕಾಸ್ತ್ರದಿಂದ ಹೊಡೆದು ಕೊರಳಲ್ಲಿದ್ದ ಸರ ಕಿತ್ತು ಪರಾರಿಯಾಗಿದ್ದರು. ಈ ಕುರಿತು ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಹಲ್ಲೆ ನಡೆಸಿ ಕಳ್ಳತನ ಮಾಡುತ್ತಿದ್ದುದರಿಂದ ಗ್ರಾಮೀಣ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಕೇಂದ್ರಕ್ಕೆ ಸಮೀಪ ವಿರುವ ಗ್ರಾಮಗಳಲ್ಲಿ ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡಲೂ ಭಯ ಪಡುತ್ತಿದ್ದರು.
ಇನ್ನು ಬಂಧಿತರು 26 ಸರ ಕಳ್ಳತನ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅಲ್ಲದೆ ಎರಡು ಪಲ್ಸರ್ ಬೈಕ್ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. 26 ಪ್ರಕರಣಗಳಿಗೆ ಸಂಬಂಧಿಸಿದಂತೆ 25 ಲಕ್ಷ ರೂ. ಮೌಲ್ಯದ 510 ಗ್ರಾಂ ನ 23 ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್, ಚಾಕು ಸ್ಪಾನರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವಿವರಿಸಿದರು.