ಬಸ್ಗಳು ಸರ್ಕಾರದ್ದು, ಆದರೂ ನೌಕರರು ಸರ್ಕಾರಿ ನೌಕರರಲ್ಲ-ಹೇಗಿದೆ ಲೆಕ್ಕಾಚಾರ!?
ಜೂ.29ರಂದು ರಿಚ್ಮಂಡ್ ವೃತ್ತದಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ EPS ಪಿಂಚಣಿದಾರರ ಬೃಹತ್ ಪ್ರತಿಭಟನೆ

ಬೆಂಗಳೂರು: ಕನಿಷ್ಠ ಪಿಂಚಣಿ 7500 ರೂ. ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ “ನಿಧಿ ಆಪ್ಕೆ ನಿಕಟ್” ದಿನವಾದ ಜೂ.29ರಂದು ಇಪಿಎಸ್ ಪಿಂಚಣಿದಾರರ 42ನೇ ಬೃಹತ್ ಪ್ರತಿಭಟನೆಯನ್ನು EPS-95, ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ನಗರದ ರಿಚ್ಮಂಡ್ ವೃತ್ತದಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ ಅಂದು ಸೋಮವಾರ ಬೆಳಗ್ಗೆ 10:30 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕು ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಬಸ್ಸುಗಳು ಸರ್ಕಾರದ್ದು, ಆದರೂ ನೌಕರರು ಸರ್ಕಾರಿ ನೌಕರರಲ್ಲ. ಹೇಗಿದೆ ಲೆಕ್ಕಾಚಾರ! ರಾಜ್ಯದ ಇತಿಹಾಸದಲ್ಲೇ ಸಾರಿಗೆ ಸಂಸ್ಥೆಯ ನೌಕರರು ಸೇವೆಯಲ್ಲಿರಲಿ ಅಥವಾ ನಿವೃತ್ತರಾಗಿರಲಿ ತಮ್ಮ ಬದುಕಿಗಾಗಿ ನಡೆಸಿದಷ್ಟು ಹೋರಾಟವನ್ನು ಬೇರೆ ಯಾವುದೇ ಕಂಪನಿ ಕಾರ್ಖಾನೆಯ ಉದ್ಯೋಗಿಗಳು ನಡೆಸಿಲ್ಲ.
ನೌಕರ, ಅದರಲ್ಲೂ ಚಾಲನಾ ಸಿಬ್ಬಂದಿಗಳು ತನ್ನ ಕುಟುಂಬಕ್ಕಿಂತ ಸಂಸ್ಥೆಯನ್ನೇ ಹೆಚ್ಚು ಪ್ರೀತಿಸುತ್ತಾನೆ. ಸಂಸ್ಥೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಹಬ್ಬ ಹರಿದಿನಗಳನ್ನು ಬದಿಗಿಟ್ಟು, ದಿನ ಬೆಳಗಾದರೆ ಡ್ಯೂಟಿಗೆ ಹೋಗಬೇಕು ಎನ್ನುತ್ತಾನೆ. ಇಷ್ಟೊಂದು ಕಷ್ಟ ಕಾರ್ಪಣ್ಯಗಳ ನಡುವೆ ತದೇಕಚಿತ್ತ ಹಾಗೂ ಏಕಾಗ್ರತೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸುವ ಮೂಲಕ ನಾಡಿನ ಜನತೆಯ ಪ್ರೀತಿ ಪಾತ್ರರಾಗಿದ್ದಾರೆ.
ಆದರೂ, ಕೇಂದ್ರ, ರಾಜ್ಯ ಸರ್ಕಾರ, ಇಪಿಎಫ್ಒ ಅಧಿಕಾರಿಗಳು ಈ ಸಂಸ್ಥೆಯ ಹಾಲಿ ಹಾಗೂ ನಿವೃತ್ತ ನೌಕರರನ್ನು ನಿರ್ಲಕ್ಷಿಸಿರುವುದು ಎಷ್ಟು ಸರಿ? ಏನೇ ಆಗಲಿ ಹೋರಾಟದ ಮೂಲಕ ನಿವೃತ್ತರು ತಮ್ಮ ಹಕ್ಕನ್ನು ಪ್ರತಿಪಾದಿಸಿ, ಈ ಸಂಗ್ರಾಮದಲ್ಲಿ ಜಯಗಳಿಸುವುದು ಶತಸಿದ್ಧ ಎಂಬ ನಂಬಿಕೆ ಇಡೋಣ ಎಂಬ ಕೂಗು ಹಾಕಲಿದ್ದಾರೆ.
ಇನ್ನು ಬರುವ ಜುಲೈ 1ರಂದು ಸಿಬಿಟಿ ಕಾರ್ಯಕಾರಿ ಸಮಿತಿ ತನ್ನ 118ನೇ ಸಭೆಯನ್ನು ದೆಹಲಿಯ ಕೇಂದ್ರೀಯ ಭವಿಷ್ಯ ನಿಧಿ ಕಚೇರಿಯಲ್ಲಿ ನಡೆಸಲಿದ್ದು, ಇದು ಪಾರ್ಲಿಮೆಂಟ್ನ ಮುಂಗಾರು ಅಧಿವೇಶನದ ಪೂರ್ವಬಾವಿ ಸಭೆಯಾಗಿದೆ. ಅಂದರೆ ಮುಂಗಾರು ಅಧಿವೇಶನ ಜುಲೈ 21ರಿಂದ ಆಗಸ್ಟ್ 21ರ ವರೆಗೆ ನಡೆಯಲಿದ್ದು, ಸಿಬಿಟಿ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪಾರ್ಲಿಮೆಂಟ್ ಅಧಿವೇಶನ ಇವೆರಡಕ್ಕೂ ಸಾಮ್ಯತೆ ಇದೆ.
ಇಪಿಎಸ್ ನಿವೃತ್ತರ ಪಾಲಿಗೆ ಇವೆರಡೂ ಅತ್ಯಂತ ಮಹತ್ವದ್ದಾಗಿರುತ್ತವೆ. ಖಚಿತ ಮೂಲಗಳ ಪ್ರಕಾರ ಮುಂಗಾರು ಅಧಿವೇಶನದಲ್ಲಿ ಇಪಿಎಸ್ ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಸಚಿವರು ಇಪಿಎಸ್ ಪಿಂಚಣಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಮಂಡಿಸುವ ಸಾಧ್ಯತೆ ಇದೆ. ದೇಶಾದ್ಯಂತ ಇರುವ 82 ಲಕ್ಷ ಇಪಿಎಸ್ ನಿವೃತ್ತರ ಸಂಕಷ್ಟಗಳ ಬಗ್ಗೆ ಪಾರ್ಲಿಮೆಂಟ್ ಸದಸ್ಯರು ಈ ಬಾರಿ ಧ್ವನಿ ಎತ್ತುತ್ತಾರೆ ಎಂದು ನಾವಾದರೂ ಭಾವಿಸುತ್ತೇವೆ.
ನಮ್ಮ ರಾಜ್ಯದ ಉಚ್ಚ ನ್ಯಾಯಾಲಯವು ಸೇರಿದಂತೆ ದೇಶದ ವಿವಿಧ ರಾಜ್ಯ ಉಚ್ಚ ನ್ಯಾಯಾಲಯಗಳು 2014 ರ ನಂತರ ನಿವೃತ್ತರಾದ ನೌಕರರಿಗೆ ಅಧಿಕ ಪಿಂಚಣಿ ನೀಡುವಂತೆ ಆದೇಶ ಹೊರಡಿಸಿದ್ದು, ಅಧಿಕಾರಿಗಳು ಹೊರಡಿಸಿದ್ದ, ಕಚೇರಿ ಆದೇಶಗಳು, ಕೆಲವೊಂದು ಸುತ್ತುವಲೆಗಳನ್ನು ಬದಿಗಿರಿಸಿ, ಇಪಿಎಸ್ ನಿವೃತ್ತರು ಸಲ್ಲಿಸಿರುವ ಜಂಟಿ ಆಯ್ಕೆ ಪತ್ರಗಳನ್ನು ಕಾನೂನು ಬದ್ಧವಾಗಿ ಪರಿಗಣಿಸಿ, ತೀರ್ಮಾನಿಸಬೇಕೆಂದು ಆದೇಶಿಸಿವೆ.
ಈ ಬಗ್ಗೆ ವಿವಿಧ ನ್ಯಾಯಾಲಯದ ತೀರ್ಪು ಸಹಿತ, ಪ್ರತಿಭಟನೆ ವೇಳೆ ಚರ್ಚಿಸಿ, ಇಪಿಎಸ್ ಹೋರಾಟಗಾರರಿಗೆ ಮನವರಿಕೆ ಮಾಡಿಕೊಡಲಾಗುವುದು. ಇತ್ತೀಚೆಗೆ ನಮ್ಮ ರಾಜ್ಯ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಇಪಿಎಫ್ಒ ಅಧಿಕಾರಿಗಳಿಗೆ ಮತ್ತೊಂದು ಮನವಿ ಪತ್ರ ನೀಡಿ, ತಾಕಿತು ಮಾಡಲಾಗುವುದು.
ನ್ಯಾಷನಲ್ ಕಾನ್ಫಿಡೆರೇಷನ್ ಆಫ್ ಪೆನ್ಷನರ್ಸ್ ಅಸೋಸಿಯೇಷನ್ NCPA ರಾಷ್ಟ್ರಮಟ್ಟದಲ್ಲಿ ತನ್ನ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಿದ್ದು, ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಎರಡು ಪ್ರಮುಖ ತೀರ್ಪುಗಳನ್ನು ಅನುಷ್ಠಾನಗೊಳಿಸಬೇಕೆಂದು ತೀವ್ರವಾಗಿ ಆಗ್ರಹಿಸಿದೆ.
ಪ್ರತಿಭಟನಾ ಸಭೆಗೆ ಕಾರ್ಮಿಕ ಮುಖಂಡರು, ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಅಧಿಕಾರಿಗಳು ಮುಖಂಡರಿಗೆ ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು?. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗುವುದು ತಿಳಿಸಿದ್ದಾರೆ.







