ಬೆಂಗಳೂರು: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳಿಗೆ ನಿರ್ಬಂಧ ಮಾಡಿರುವ ಬಗ್ಗೆ ಸಾರಿಗೆ ಸಚಿವರಿಗೆ ಚಾಲಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಾರೆ.

ಎಂದಿನಂತೆ ಪಿಕಪ್ ಪಾಯಿಂಟ್ಗೆ ಅನುಮತಿ ಕೊಡಿಸುವಂತೆ ಚಾಲಕರು ಸಾರಿಗೆ ಸಚಿವರ ಮೊರೆ ಹೋಗಿದ್ದರು. ಈ ಚಾಲಕರ ಮನವಿ ಹಿನ್ನೆಲೆಯಲ್ಲಿ ಸಚಿವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಪಾರ್ಕಿಂಗ್ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿ, ಟರ್ಮಿನಲ್ನಿಂದ ಟ್ಯಾಕ್ಸಿ ಚಾಲಕರಿಗೆ ನೀಡಿರುವ ಪಿಕಪ್ ಪಾಯಿಂಟ್ ದೂರವಿದ್ದು ಪ್ರಯಾಣಿಕರು ಬರಲು ಕಷ್ಟವಾಗುತ್ತೆ ಮೊದಲು ಇದ್ದಲ್ಲೆ ಇವರಿಗೂ ಅವಕಾಶ ನೀಡಬಹುದಲ್ವಾ ಎಂದು ಕೇಳಿದ್ದಾರೆ.
ಅಲ್ಲದೆ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡಲು ಹೊರಟಿದ್ದು ಇದು ಸರಿಯಲ್ಲ ಎಂದು ಅಸಮಧಾನ ಹೊರ ಹಾಕಿದರು.
ಟರ್ಮಿನಲ್ 1ರ ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಕೂಡ 14 ಇದ್ದ ಬಸ್ಗಳನ್ನು 7ಕ್ಕೆ ಇಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ವಾ? ಎಂದು ಏರ್ಪೋರ್ಟ್ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಆಡಳಿತ ಮಂಡಳಿ ಜತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಮಾನ ನಿಲ್ದಾಣದ ಟರ್ಮಿನಲ್ 1ರ ಪಿಕಪ್ ಪಾಯಿಂಟ್ನಲ್ಲಿ ಕಳೆದ ಡಿಸೆಂಬರ್ 11ರಿಂದ ಹಳದಿ ಬೋರ್ಡ್ ಕ್ಯಾಬ್ಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಈ ಹೊಸ ರೂಲ್ಸ್ನಿಂದ ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ ಶುರುವಾಗಿದೆ.
Related










