ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಕಬ್ಬನ್ ಪಾರ್ಕ್ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿದ್ದು ಅದರ ವಿಚಾರಣೆಗಾಗಿ ಪೊಲೀಸರ ಮುಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ಬೆಳಗ್ಗೆ ಹಾಜರಾಗಿದ್ದಾರೆ.
ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿದ ರಮೇಶ್ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಯುವತಿ ವಕೀಲರ ಮೂಲಕ ಲಿಖಿತ ದೂರು ನೀಡಿದ್ದರು.
ಆ ದೂರಿನನ್ವಯ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಈ ಪ್ರಕರಣದ ತನಿಖೆ ಜವಾಬ್ದಾರಿ ಎಸ್ಐಟಿಗೆ ಹಸ್ತಾಂತರವಾಗಿಲ್ಲ.
ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್ ವಿಚಾರಣೆಗೆ ಬರುವಂತೆ ರಮೇಶ್ ಅವರಿಗೆ ಭಾನುವಾರ ನೋಟಿಸ್ ನೀಡಿದ್ದರು. ನೋಟಿಸ್ ಸ್ವೀಕರಿಸಿದ ರಮೇಶ್ ಆಡುಗೋಡಿಯಲ್ಲಿರುವ ವಿಶೇಷ ವಿಚಾರಣಾ ಕೊಠಡಿಗೆ ಬಂದಿದ್ದಾರೆ. ಇನ್ಸ್ಪೆಕ್ಟರ್ ವಿಚಾರಣೆ ಆರಂಭಿಸಿದ್ದಾರೆ.