CRIMENEWSನಮ್ಮಜಿಲ್ಲೆ

ಮಕ್ಕಳಿಂದ ನಿರ್ಲಕ್ಷ್ಯಕೊಳಗಾದ ವೃದ್ಧ ದಂಪತಿ ತುತ್ತು ಊಟಕ್ಕೂ ಪರದಾಡಿದ ಬಳಿಕ ಆತ್ಮಹತ್ಯೆ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಹೆತ್ತ ಅಪ್ಪ-ಅಮ್ಮನನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಂದ ನಿರ್ಲಕ್ಷ್ಯಕೊಳಗಾದ ವೃದ್ಧ ದಂಪತಿಗಳು ತುತ್ತು ಊಟಕ್ಕೂ ಪರದಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ಕರೀಗೌಡ ಕಾಲೊನಿಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರೇಹೊಸೂರು ಗ್ರಾಮದ ನಿವಾಸಿಗಳಾದ ಡೇನಿಯಲ್-ಮೇರಿ ದಂಪತಿಯೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡವರು.

ಡೇನಿಯಲ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು ಸುಮಾರು ಐವತ್ತು ವರ್ಷಗಳ ಹಿಂದೆ ಮೇರಿಯನ್ನು ವಿವಾಹವಾಗಿದ್ದರು. ನೆಲ್ಸನ್, ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಡೇನಿಯಲ್ ಕಷ್ಟಪಟ್ಟು ದುಡಿದು ಹಾರೇಹೊಸೂರಿನಲ್ಲಿ ಕಾಫಿ ತೋಟ, ಮನೆ ಸೇರಿದಂತೆ ಆಸ್ತಿ ಮಾಡಿ ಮಕ್ಕಳಿಗೆ ಒಳ್ಳೆಯ ಕಡೆ ಹೆಣ್ಣು ತಂದು ವಿವಾಹ ಮಾಡಿದ್ದಾರೆ.

ಈ ನಡುವೆ ನೆಲ್ಸನ್ ಎಂಬಾತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೆ ಮತ್ತೋರ್ವ ಮಗ ವಿಲ್ಸನ್ ಹಾರೇಹೊಸೂರಿನಲ್ಲಿ ಕಾಫಿ ತೋಟ ನೋಡಿಕೊಂಡಿದ್ದಾನೆ. ಇತ್ತೀಚಿನ ಕೆಲವು ವರ್ಷಗಳಿಂದ ಈ ಇಬ್ಬರೂ ಮಕ್ಕಳು ವಯೋವೃದ್ಧ ತಂದೆ-ತಾಯಿಯನ್ನು ಆರೈಕೆ ಮಾಡಲು ನಿರ್ಲಕ್ಷಿಸಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಕೊಡುತ್ತಿರಲಿಲ್ಲ. ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಆಸ್ಪತ್ರೆಗೆ ಕರೆದೊಯ್ಯದೆ ಮೃಗೀಯ ವರ್ತನೆ ತೋರುತ್ತಿದ್ದರು.

ಮಕ್ಕಳ ನಿರ್ಲಕ್ಷ್ಯತನದಿಂದ ಬೇಸತ್ತ ವೃದ್ಧ ದಂಪತಿ ಕೆಲವು ದಿನಗಳಿಂದ ವಿರಾಜಪೇಟೆಯ ವೃದ್ಧಾಶ್ರಮಕ್ಕೆ ಸೇರಿದ್ದರು. ಆದರೆ, ಯಜಮಾನನಂತೆ ದುಡಿದು ಬದುಕಿ ಆಸ್ತಿ ಮಾಡಿ ಮಕ್ಕಳನ್ನು ಸಾಕಿ ಸಲುಹಿದ ದಂಪತಿಗೆ ವೃದ್ಧಾಶ್ರಮದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಾನಸಿಕವಾಗಿ ತೀವ್ರ ಕುಗ್ಗಿ ಹೋಗಿದ್ದ ದಂಪತಿ ಮೊನ್ನೆ ವೃದ್ಧಾಶ್ರಮದಿಂದ ಹೊರಟು ಸಾರಿಗೆ ಬಸ್‌ನಲ್ಲಿ ಆಗಮಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಇಳಿದು ರೈಲ್ವೆ ಟ್ರ‍್ಯಾಕ್ ಮೇಲೆ ಮಲಗಿ ರೈಲಿಗೆ ಸಿಲುಕಿ ದಾರುಣವಾಗಿ ಕೊನೆಯುಸಿರೆಳಿದಿದ್ದಾರೆ.

ನಿನ್ನೆ ಮಧ್ಯಾಹ್ನದ ನಂತರ ಮೃತ ದಂಪತಿ ಗುರುತು ಪತ್ತೆಯಾಗಿದ್ದು, ಮಕ್ಕಳಿಗೆ ವಿಷಯ ತಿಳಿಸಿದರೂ ಮೃತದೇಹಗಳನ್ನು ಕೊಂಡೊಯ್ಯಲು ಹಿಂದೇಟು ಹಾಕಿದ್ದರು. ಕಡೆಗೆ ಸಂಬಂಧಿಕರು ಹಾಗೂ ರೈಲ್ವೇ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದರಿಂದ ಶವಾಗಾರದ ಬಳಿ ಬಂದು ಒಂದು ಹನಿ ಕಣ್ಣೀರು ಹಾಕದೆ ತಂದೆ ಮೇಲೆಯೇ ಆರೋಪಿಸಿದ್ದಾರೆ. ತಂದೆ ಮದ್ಯ ಸೇವಿಸುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಆ ಕಾರಣದಿಂದ ಅವರೇ ಮನೆ ಬಿಟ್ಟು ಹೋಗಿದ್ದರು ಎಂದು ಆರೋಪ ಮಾಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha
the authorMegha

Leave a Reply

error: Content is protected !!