NEWSVideosನಮ್ಮಜಿಲ್ಲೆಸಂಸ್ಕೃತಿ

ವೈಭವದಿಂದ ನೆರವೇರಿದ ಬೀಡನಹಳ್ಳಿ ಶ್ರೀ ನಂದಿ ಬಸವೇಶ್ವರ ಸ್ವಾಮಿ ಕೊಂಡೋತ್ಸವ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಕಾವೇರಿ ನದಿ ಬಂಡೆಯ ಮೇಲೆ ನೆಲೆಸಿರುವ ಬೀಡನಹಳ್ಳಿ ಗ್ರಾಮದ ಧರ್ಮಕ್ಷೇತ್ರ  ಶ್ರೀ ನಂದಿಬಸವೇಶ್ವರ ಸ್ವಾಮಿಯ 14ನೇ ಕೊಂಡ ಮಹೋತ್ಸವ ಸೋಮವಾರ ಫೆ.23ರ ಮುಂಜಾನೆ 6ರಿಂದ 6.45ರವರೆಗೆ ವಿಜೃಂಭಣೆಯಿಂದ ನೆರವೇರಿತು.

ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದ ಅನ್ನಾದಾನಪ್ರಭು ಶ್ರೀ ನಂದಿಬಸವೇಶ್ವರ ಸ್ವಾಮಿಯ ಕೊಂಡವನ್ನು ಕಾಶಿವೇಷಧಾರಿ ಮಹದೇವಸ್ವಾಮಿ ಅವರು ಗಜಗಾಂಭೀರ್ಯದಿಂದ ಹಾಯ್ದರು. ಇವರ ನಂತರ ಶ್ರೀಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೇಗೌಡ ಹಾಗೂ ರಾಜೇಶ್‌ ಅವರು ಕೂಡ ಈಬಾರಿ ನಿಧಾನವಾಗಿ ಕೊಂಡ ಹಾಯುವ ಮೂಲಕ ಭಕ್ತರಲ್ಲಿ ಭಕ್ತಿಯ ಸೆಲೆ ಮೂಡಿಸಿದರು.

ಇನ್ನು ಕೊಂಡ ಹಾಯುವುದಕ್ಕೂ ಮುನ್ನಾ ಮುಂಜಾನೆ ಶ್ರೀಸ್ವಾಮಿಯ ಸನ್ನಿಧಿಯಿಂದ ಶ್ರೀಸ್ವಾಮಿಯ ಬಸವನ ಜತೆಗೆ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಯೊಂದಿಗೆ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ಗುರುಸ್ವಾಮಿ ಅವರ ಮನೆಗೆ ಕರೆತರಲಾಯಿತು.

ಗುರುಸ್ವಾಮಿ ಅವರ ಮನೆಯಲ್ಲಿ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳಿಗೆ ಹೂ ಹೊಂಬಾಳೆ ಮಾಡಿದ ನಂತರ ಶ್ರೀಸ್ವಾಮಿಗೆ ಹರಕೆ ಹೊತ್ತ ಭಕ್ತರು ಬಾಯಿಬೀಗ ಚುಚ್ಚಿಸಿಕೊಂಡರು. ಬಳಿಕ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಮೆರವಣಿಗೆ ಮೂಲಕ ಶ್ರೀಸ್ವಾಮಿಯ ಆವರಣ ತಲುಪಿದರು.

ರಾತ್ರಿಯಿಡಿ ಹುಣಸೆ ಸೌದೆಯಿಂದ (ಕಟ್ಟಿಗೆ) ಬೇಸಿಗೆ ಸೂರ್ಯನನ್ನು ಮೀರಿಸುವಂತೆ ಸಿದ್ಧಗೊಳಿಸಿದ್ದ ಕೊಂಡದ ಬಳಿ ಎಲ್ಲರೂ ಬಂದು ಸೇರಿದರು. ಬಾಯಿಬೀಗ ಹರಕೆ ಹೊತ್ತಿದ್ದ ಭಕ್ತರು ಪಂಜಿನ ಸೇವೆಯನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಾಡಿ ಶ್ರೀಸ್ವಾಮಿಗೆ ಭಕ್ತಿಯಿಂದ ನಮಿಸಿದರು.

ಇನ್ನು ಕೊಂಡದ ಬಳಿ ಬರುತ್ತಿದ್ದಂತೆ ಕೊಂಗ ಬೀಸಿ ಕೆಂಡದ ಮೇಲೆ ಇದ್ದ ಬೂದಿಯನ್ನು ತೆರವುಗೊಳಿಸಲಾಯಿತು. ಬಳಿಕ ಕಾಶಿಯ ವೇಷಧಾರಿ ಮಹದೇವಸ್ವಾಮಿ, ಅವರ ಹಿಂದೆ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೇಗೌಡ ಹಾಗೂ ರಾಜೇಶ್‌ ಅವರು ಕೊಂಡ ಹಾಯ್ದರು.

ಕೊಂಡ ಹಾಯುವುದನ್ನು ಪ್ರತಿಯೊಬ್ಬರೂ ನೋಡಲೆಂದು ಬೆಳ್ಳಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ಕಣ್ತುಂಬಿಕೊಂಡು ಶ್ರೀಸ್ವಾಮಿಯ ಕೃಪೆಗೆ ಪಾತ್ರರಾದರು.

ಭಾನುವಾರ ಬಂಡಿಯುತ್ಸವ ನಡೆಯಿತು. ಇಂದು ಕೊಂಡೋತ್ಸವ ನೆರವೇರುವ ಮೂಲಕ ಬಂಡಿಕೊಂಡೋತ್ಸವ ಪೂರ್ಣಗೊಂಡಿತು. ಒಟ್ಟಾರೆ ಕಳೆದ 13 ವರ್ಷದಲ್ಲೇ  ಇಂದು ನಡೆದ 14ನೇ ಕೊಂಡೋತ್ಸವ ಭಾರಿ ವಿಜೃಂಭಣೆಯಿಂದ ಕೂಡಿತ್ತು.

Megha
the authorMegha

Leave a Reply

error: Content is protected !!
Latest news
ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ