ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಿಗೆ 2026-27ನೇ ಸಾಲಿನಲ್ಲಿ ಶಕ್ತಿಯೋಜನೆಯ ಅನುಷ್ಠಾನಕ್ಕಾಗಿ ಮುಂಗಡವಾಗಿ 500 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ನಿನ್ನೆ ಅಂದರೆ ಮಾ.27ರ ಶುಕ್ರವಾರ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್.ಪುಷ್ಪ ಅವರು ರಾಜ್ಯಪಾಲರ ಆದೇಶಾನುಸಾರ ಆದೇಶ ಹೊರಡಿಸಿದ್ದಾರೆ.
ಪ್ರಸ್ತಾವನೆ ಪರಿಶೀಲಿಸಿ, ಸರ್ಕಾರವು ಈ ಆದೇಶ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಳಿಗೆ 2026-27ನೇ ಸಾಲಿನಲ್ಲಿ ಶಕ್ತಿ ಯೋಜನೆಯ ಅನುಷ್ಠಾನಕ್ಕಾಗಿ ಮುಂಗಡವಾಗಿ 500 ಕೋಟಿ ರೂ.ಗಳನ್ನು ಷರತ್ನುಗಳಿಗೊಳಪಟ್ಟು ಶೇಕಡವಾರು ಅನುಪಾತದನ್ವಯ ನಿಗಮವಾರು ಬಿಡುಗಡೆಗೊಳಿಸಿರುವುದಾಗಿ ವಿ.ಎಸ್.ಪುಷ್ಪ ತಿಳಿಸಿದ್ದಾರೆ.
ಬಿಡುಗಡೆ ಮಾಡಿರುವ 500 ಕೋಟಿ ರೂ.ಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 194.05 ಕೋಟಿ ರೂ.ಗಳು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ85.65 ಕೋಟಿ ರೂ.ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 121.90 ಕೋಟಿ ರೂ.ಗಳು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 98.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಷರತ್ತುಗಳು: 1. ನಾಲ್ಕೂ ಸಾರಿಗೆ ಸಂಸ್ಥೆಗಳು 2025-26ನೇ ಸಾಲಿನ ವಾಸ್ತವಿಕ ವೆಚ್ಚದ ಕ್ರೋಢೀಕೃತ ವಿವರಗಳನ್ನು (ವಿಭಾಗವಾರು) ಶಕ್ತಿ ಯೋಜನೆಯ ನೋಡಲ್ ಸಂಸ್ಥೆಯಾದ KSRTC ನಿಗಮವು ಸರ್ಕಾರಕ್ಕೆ ಸಲ್ಲಿಸಬೇಕು.
2. ಈ ಅನುದಾನದ ಬಿಡುಗಡೆಯು ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ಕೂಡಲೇ ವಿತರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
3. ನಾಲ್ಕೂ ಸಾರಿಗೆ ಸಂಸ್ಥೆಗಳು ಬಿಡುಗಡೆ ಮಾಡಿರುವ ಅನುದಾನದ ಬಳಕೆ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
4. ಈ ಸಂಬಂಧ ದಿನಾಂಕ : 30.03.2026 ರೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕು.
ಬಿಡುಗಡೆ ಮಾಡಿರುವ ಅನುದಾನವನ್ನು ನಾಲ್ಕೂ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರಿಂದ ಪೇಯೀಸ್ ರಶೀದಿಗೆ ಮೇಲುರುಜು ಪಡೆದು ರಾಜ್ಯ ಹುಜೂರು ಖಜಾನೆಯಿಂದ ಡ್ರಾ ಮಾಡಲು ಅನುಮತಿ ನೀಡಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ನೀಡಿರುವ ಸಹಮತಿಯನ್ವಯ ಹಾಗೂ ಆರ್ಥಕ ಇಲಾಖೆ ಆದೇಶ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನವ್ಯ ಹೊರಡಿಸಲಾಗಿದೆ ಎಂದು ಪುಷ್ಪ ತಿಳಿಸಿದ್ದಾರೆ.
ಇನ್ನು 2025- ಏಪ್ರಿಲ್ನಿಂದ 2026 ಮಾರ್ಚ್ ತಿಂಗಳ ವರೆಗೆ ನಾಲ್ಕೂ ಸಾರಿಗೆ ಸಂಸ್ಥೆಗಳಿಗೂ ಸರ್ಕಾರ 1824 ಕೋಟಿ ರೂ.ಗಳನ್ನು ಶಕ್ತಿ ಯೋಜನೆಯಲ್ಲಿ ಬಿಡುಗಡೆ ಮಾಡಿತ್ತು. ಈಗ ಮುಂಗಡವಾಗಿ 2026-27ನೇ ಸಾಲಿಗೆ 500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಬೇಕಿದ್ದು ಬರಿ 26 ತಿಂಗಳ ಹಿಂಬಾಕಿ ಜೊಡುವುದಾಗಿ ಘೋಷಿಸಿದೆ.
ಅಲ್ಲದೆ 2024ರ ಜನವರಿ 1ರಿಂದ ಮತ್ತೆ ನೌಕರರ ವೇತನ ಹೆಚ್ಚಳವಾಗಬೇಕಿದೆ. ಆದರೆ ಅದನ್ನು 15 ತಿಂಗಳ ಮುಂದಕ್ಕೆ ಹಾಕಿ ಅಂದರೆ 2025ರ ಏಪ್ರಿಲ್ 1ರಿಂದ ಜಾರಿ ಮಾಡುವುದಕ್ಕೆ ಹೊರಟಿದೆ. ಇದು ನೌಕರರಿಗೆ ಮಾಡುತ್ತಿರುವ ಭಾರಿ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯ ಹಣ ಬಿಡುಗಡೆ ಆದೇಶ KSRTC
Related










