NWKRTC ಹಾವೇರಿ: ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಪ್ಲಾಟ್ಫಾರಂನಲ್ಲಿ ನಿಂತಿದ್ದವರಿಗೆ ಡಿಕ್ಕಿ- ಮಗು ಸಾವು

ಹಾವೇರಿ: ಚಾಲಕನ ನಿಯಂತ್ರಣ ಕಳೆದುಕೊಂಡ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಪ್ಲಾಟ್ಫಾರಂನಲ್ಲಿ ನಿಂತಿದ್ದ ಪ್ರಯಾಣಿಕರಿಗೆ ಡಿಕ್ಕಿಹೊಡೆದ ಪರಿಣಾಮ 7 ವರ್ಷದ ಬಾಲಕ ಮೃತಪಟ್ಟಿದ್ದು, 4-5ಜನರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ 6.40ರ ಸುಮಾರಿನಲ್ಲಿ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಈ ಅಪಘಾತದಲ್ಲಿ ಹಾವೇರಿಯ ನಿವಾಸಿ ಇಸ್ಮಾಯಿಲ್ ಎಂಬುವರ ಪುತ್ರ 7 ವರ್ಷ ಬಾಲಕ ಹಜರತ್ ಅಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಉಳಿದಂತೆ 4-5 ಜನರು ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ನಿಲ್ದಾಣದ ಪ್ಲಾಟ್ಫಾರಂಗೆ ಬರುತ್ತಿದ್ದಂತೆ ಪ್ರಯಾಣಿಕರು ಪ್ಲಾಟ್ಫಾರಂನಲ್ಲಿ ನಿಲ್ಲುತದೆ ಎಂದು ಅತ್ತಯಿತ್ತ ಸರಿದಿದ್ದಾರೆ. ಆದರೆ, ಬಸ್ ಪ್ಲಾಟ್ಫಾರಂನ ತಡೆಗೋಡೆಯನ್ನು ದಾಟಿ ನಿಲ್ದಾಣದಲ್ಲಿನ ಹಾಸನಗಳ ಭಾಗಕ್ಕೆ ಹೋಗಿ ನಿಂತಿದೆ.
ಈ ವೇಳೆ ಪ್ಲಾಟ್ಫಾರಂನಲ್ಲಿದ್ದ ಹಲವರು ಚದುರಿದ್ದಾರೆ. ಆದರೆ ಈ ಬಾಲಕ ಈತನ ಜತೆಗಿದ್ದ ಮತ್ತೊಬ್ಬರು ಬಸ್ ಕೆಳಗೆ ಸಿಲುಕಿಕೊಂಡಿದ್ದಾರೆ. ಆಗ ಬಸ್ನ ಚಕ್ರಕ್ಕೆ ಸಿಲುಕಿಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಸುನೀಗಿದೆ. ಮತ್ತೊಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಇವರಷ್ಟೆ ಅಲ್ಲದೆ ಇನ್ನೂ ಮೂವರು ಮಂದಿ ಗಾಯಗೊಂಡಿದ್ದಾರೆ.
ಬಸ್ ಬ್ರೇಕ್ಫೇಲಾಗಿ ಚಾಲಕ ನಿಯಂತ್ರಣ ಕಳೆದುಕೊಂಡು ಈ ಘಟನೆ ಸಂಭವಿಸಿದೆಯೋ ಇಲ್ಲ ಇದು ಚಾಲಕನ ಅಜಾಗರುಕತೆಯಿಂದ ಸಂಭವಿಸಿದೆಯೋ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ (ಡಿಟಿಒ) ಅಶೋಕ್ ಆರ್.ಪಾಟಿಲ್ ತಿಳಿಸಿದ್ದಾರೆ.
ಇನ್ನು ಘಟನೆ ಸಂಬಂಧ ಹಾವೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related









