KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ
ಪ್ರಧಾನಮಂತ್ರಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಕರೆ ನೀಡಿರುವ ಹಿನ್ನೆಲೆ, ರಾಜ್ಯದ ಹಿತ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಬಸ್ ಪ್ರಯಾಣದ ಟಿಕೆಟ್ ದರದ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು-ಸಿಎಂ ಡಿಕೆಶಿ

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ಡೀಸೆಲ್ (Diesel) ದರ ಏರಿಕೆ ಹಿನ್ನೆಲೆ ಸರ್ಕಾರಿ ಬಸ್ಗಳ ಪ್ರಯಾಣ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈ ಸಂಬಂಧ ಈಗಾಗಲೇ KSRTC BMTC KKRTC ಹಾಗೂ NWKRTC ಈ ನಾಲ್ಕೂ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಿಸದಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಶೇ.15ರಿಂದ ಶೇ.20ರಷ್ಟು ಏರಿಕೆ ಮಾಡುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಡಿಪೋಗಳಲ್ಲಿ ಸಿಗುವ ಡೀಸೆಲ್ ಬೆಲೆ ಮತ್ತು ಖಾಸಗಿ ಪೆಟ್ರೋಲ್ ಬಂಕ್ಗಳಲ್ಲಿ ಸಿಗುವ ಬೆಲೆ ನಡುವೆ ದೊಡ್ಡ ಅಂತರವಿದೆ ಎಂದರು.
ಇನ್ನು ಡೀಸೆಲ್ ದರ ಹೆಚ್ಚಳದಿಂದ ಸಾರಿಗೆ ನಿಗಮಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಈ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಸಾರಿಗೆ ನಿಗಮಗಳನ್ನು ಉಳಿಸಿಕೊಳ್ಳುವುದು ಮುಖ್ಯ. ಅದೇ ಸಮಯದಲ್ಲಿ ಜನರ ಮೇಲೂ ಹೆಚ್ಚಿನ ಹೊರೆ ಬೀಳಬಾರದು. ಈ ಎರಡನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದರು.
ಸರ್ಕಾರದ ಮಾಹಿತಿ ಪ್ರಕಾರ, ಸಾರಿಗೆ ಘಟಕಗಳಲ್ಲಿ ಖರೀದಿಸುವ ಡೀಸೆಲ್ ಮತ್ತು ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಡೀಸೆಲ್ ದರದ ನಡುವೆ ಸುಮಾರು ₹40 ವ್ಯತ್ಯಾಸವಿದೆ. ಇದರಿಂದ ಕೆಲವು ಖಾಸಗಿ ಸಾರಿಗೆ ಸಂಸ್ಥೆಗಳು ಡಿಪೋಗಳಿಂದ ಡೀಸೆಲ್ ಖರೀದಿಸುವುದನ್ನೇ ನಿಲ್ಲಿಸಿವೆ ಎನ್ನಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡೀಸೆಲ್ ದರ ಏರಿಕೆಯಾದರೆ ಸ್ವಯಂಚಾಲಿತವಾಗಿ ಬಸ್ ದರ ಹೆಚ್ಚಿಸುವ ವ್ಯವಸ್ಥೆ ಇತ್ತು. ಈಗಲೂ ಇದೇ ರೀತಿಯ ಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ.
ಪ್ರಧಾನಮಂತ್ರಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಕರೆ ನೀಡಿರುವ ಹಿನ್ನೆಲೆ, ರಾಜ್ಯದ ಹಿತ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಬಸ್ ಪ್ರಯಾಣದ ಟಿಕೆಟ್ ದರದ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ಇತ್ತ KSRTC BMTC KKRTC ಹಾಗೂ NWKRTC ಈ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳ ಮೇಲೆಯೇ ಅವಲಂಬಿತರಾಗಿರುವ ಲಕ್ಷಾಂತರ ಜನರು ಈಗ ಸರ್ಕಾರದ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದು, ಇದರಿಂದ ನಮ್ಮ ಜೇಬಿಗೆ ಎಷ್ಟು ಹೊರೆಯಾಗುವುದೋ ಎಂಬ ಆತಂಕದಲ್ಲೂ ಇದ್ದಾರೆ.







