SIRಗೆ ತೆರಳುತ್ತಿದ್ದ VAO ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಗ್ರಾಮಾಡಳಿತ ಲೆಕ್ಕಾಧಿಕಾರಿ ಸ್ಥಿತಿ ಗಂಭೀರ- ಆಸ್ಪತ್ರೆ ಮುಂದೆ ಪ್ರತಿಭಟನೆ
ಜಿಲ್ಲಾಧಿಕಾರಿಗಳ ವಿರುದ್ಧ ಭಾವನಾ ಪೋಷಕರು ಆಕ್ರೋಶ ಹೊರಹಾಕಿದ್ದು, ಭಾವನ ಅವರ ತಾಯಿ, ರಾತ್ರಿ 10 ಗಂಟೆವರೆಗೆ ಮೀಟಿಂಗ್ ಮಾಡುತ್ತೀರಿ. ಬೆಳಗ್ಗೆ 6 ಗಂಟೆಗೆ ಮತ್ತೆ ಕೆಲಸಕ್ಕೆ ಕರೆಯುತ್ತೀರಿ. ನಿಮಗೆ ರ್ಯಾಂಕಿಂಗ್ ಬೇಕು, ಪ್ರೊಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೀರಾ ಎಂದು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಆಡಳಿತ ಲೆಕ್ಕಾಧಿಕಾರಿ (VAO) ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಜಿಲ್ಲೆಯ ಗೂಳೂರಿನಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಭಾವನಾ (26) ಗಂಭೀರ ಗಾಯಗೊಂಡಿರುವ ಗ್ರಾಮ ಆಡಳಿತ ಲೆಕ್ಕಾಧಿಕಾರಿ. ಗೂಳೂರು ಹೋಬಳಿಯ ಮನೆ ಮನೆಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಭಾವನಾಗೆ ಸಿದ್ದಗಂಗಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಆಸ್ಪತ್ರೆ ಬಳಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ: ಸಿದ್ದಗಂಗಾ ಆಸ್ಪತ್ರೆ ಬಳಿ ಜಮಾಯಿಸಿರುವ ಗ್ರಾಮಾಡಳಿತ ಲೆಕ್ಕಾಧಿಕಾರಿಗಳು ಬೇಗ ಬೇಗ ಎಸ್ಐಆರ್ ಮುಗಿಸುವಂತೆ ಒತ್ತಡ ಹಾಕುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಅಹವಾಲು ಆಲಿಸಿದ್ದಾರೆ.
ಇನ್ನು, ಜಿಲ್ಲಾಧಿಕಾರಿಗಳ ವಿರುದ್ಧ ಭಾವನಾ ಪೋಷಕರು ಆಕ್ರೋಶ ಹೊರಹಾಕಿದ್ದು, ಭಾವನ ಅವರ ತಾಯಿ ಮಾತನಾಡಿ, ರಾತ್ರಿ 10 ಗಂಟೆವರೆಗೆ ಮೀಟಿಂಗ್ ಮಾಡುತ್ತೀರಿ. ಬೆಳಗ್ಗೆ 6 ಗಂಟೆಗೆ ಮತ್ತೆ ಕೆಲಸಕ್ಕೆ ಕರೆಯುತ್ತೀರಿ. ನಿಮಗೆ ರ್ಯಾಂಕಿಂಗ್ ಬೇಕು, ಪ್ರೊಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೀರಾ ಎಂದು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನಡುವೆ ಅಪಘಾತದಿಂದ ಭಾರಿ ಪೆಟ್ಟಾಗಿದ್ದು ಗಂಭೀರ ಗಾಯಗೊಂಡಿರುವ ಭಾವನಾ ಅವರ ಸ್ಥಿತಿ ಗಂಭೀರವಾಗಿದೆ. ವೈದ್ಯರು 48 ಗಂಟೆವರೆಗೂ ಏನನ್ನು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.







