ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಅಹೋರಾತ್ರಿ ಧರಣಿ ಏಳನೇದಿನಕ್ಕೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಲು ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ರೈತರ ಪ್ರತಿಭಟನೆಗೆ ಸಾಥ್ ನೀಡಿರುವ ಬಿಜೆಪಿ ನಾಯಕರು ರೈತರ ಜತೆ ರಾತ್ರಿಯಿಡೀ ಕೊರೆಯುವ ಚಳಿಯಲ್ಲೇ ಮಲಗಿದ್ದರು.
ಗುರ್ಲಾಪುರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ನಡೆಯುತ್ತಿದ್ದು, ಮನೆ, ಮಠ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲೇ ರೈತರು ಮಲಗುತ್ತಿದ್ದಾರೆ. ಇನ್ನು ರಸ್ತೆಯಲ್ಲಿಯೇ ಊಟ, ನಿದ್ದೆ ಎಲ್ಲವೂ ನಡೆಯುತ್ತಿದೆ.
ರಸ್ತೆ ಪಕ್ಕದಲ್ಲಿ ರೈತರಿಗಾಗಿ ಬೃಹತ್ ಪ್ರಮಾಣದ ಊಟ ತಯಾರಿಸಲಾಗುತ್ತಿದೆ. ಅಕ್ಕ ಪಕ್ಕದ ಗ್ರಾಮಸ್ಥರು ರೈತರಿಗೆ ದವಸ ಧಾನ್ಯಗಳನ್ನು ನೀಡಿದ್ದಾರೆ. ಇನ್ನು ನಿನ್ನೆ ಮಂಗಳವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ರೈತರ ಪ್ರತಿಭಟನೆಯಲ್ಲಿ ವಿಜಯೇಂದ್ರ ಭಾಗಿಯಾಗಿದ್ದರು.
ಇನ್ನು ಇಂದು ಹುಟ್ಟುಹಬ್ಬ ಹಿನ್ನೆಲೆ ರೈತರು ವಿಜಯೇಂದ್ರಗೆ ಶುಭಾಶಯ ಕೋರಿದರು. ಮಧ್ಯರಾತ್ರಿ 12 ಗಂಟೆಗೆ ರೈತರು ವಿಜಯೇಂದ್ರಗೆ ಶುಭ ಹಾರೈಸಿದ್ದಾರೆ. ವಿಜಯೇಂದ್ರ ರೈತರ ಪ್ರತಿಭಟನಾ ವೇದಿಕೆ ಮೇಲೆ ಮಲಗಿದ್ದರು. ವಿಜಯೇಂದ್ರ ಅವರನ್ನ ಮಧ್ಯರಾತ್ರಿ ಎಬ್ಬಿಸಿ ಅನ್ನದಾತರು ವಿಶ್ ಮಾಡಿದ್ದಾರೆ.
ಇಂದು ಬುಧವಾರ ರೈತರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಹಿಂದೆ ಸರಿಯೋ ಮಾತೆ ಇಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
Related








