ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾದವೇನು?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಪಾವತಿ ಸರ್ಕಾರದ ಸಂಕುಚಿತ ಮನೋಭಾವದಿಂದ ವಿಳಂಬಗೊಂಡಿದೆ ಎಂದು ಈ ಹಿಂದೆಯೇ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ 2020ರಲ್ಲಿ ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ ಆಗಿರಲಿಲ್ಲ. 2023ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ ನಂತರ ಮೇ ತಿಂಗಳಿನಲ್ಲಿ ಹೊಸ ಸರ್ಕಾರ ಬಂದಿತ್ತು. ಅವರು 2020 ರಿಂದ ಅನ್ವಯ ಎಂದು ಘೋಷಿಸುವ ಅವಕಾಶವಿತ್ತು.
ಆದರೆ ತಾಂತ್ರಿಕ ಕಾರಣದ ನೆಪವೊಡ್ಡಿ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದ್ದು ನೌಕರರಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲದ ಕಾರಣ ಇಂತಹ ಕುಂಟುನೆಪ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ರಾಜ್ಯ ಸರ್ಕಾರ ತಾಂತ್ರಿಕ ಕಾರಣದ ಸಬೂಬು ಹೇಳುವುದು ಬಿಟ್ಟು ಸಂಕುಚಿತ ಮನೋಭಾವ ತೊರೆದು ಸಾರಿಗೆ ನೌಕರರಿಗೆ ಸಲ್ಲಬೇಕಾದ ಬಾಕಿ ಪಾವತಿಸಲಿ. 2024ರಿಂದ ವೇತನ ಪರಿಷ್ಕರಣೆಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.
ಇತ್ತ ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗದೇ ಇರಲು ಬಿಜೆಪಿ ಸರ್ಕಾರದ ಆದೇಶವೇ ಕಾರಣ ಎಂದು ಸಚಿವ ರಾಮಲಿಂಗಾ ರೆಡ್ಡಿ ದೂರಿದ್ದು, ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಜಾರಿ ಮಾಡಬಹುದು ಅಂತಾ ಆದೇಶದಲ್ಲಿ ಇದೆ. ಬಿಜೆಪಿ ಸರ್ಕಾರದ ಈ ಆದೇಶದಿಂದ ಹಿಂಬಾಕಿ ತಡವಾಗಿದೆ ಎಂದು ಹೇಳುತ್ತಿದ್ದಾರೆ.
ಏನಿದು ಆದೇಶ?: 2023ರ ಆದೇಶದಲ್ಲಿ 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಎಂದು ಉಲ್ಲೇಖಿಸಿದೆ. ಈ ಆದೇಶದಲ್ಲಿ 2020 ರಿಂದ ಎಂದು ಉಲ್ಲೇಖ ಮಾಡಿಲ್ಲ. ಈ ಆದೇಶದ ಅನ್ವಯ ಮುಂದಿನ 4 ವರ್ಷ ಅಂದರೆ 2027 ರವರೆಗೆ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಆದೇಶದಲ್ಲಿ ಎಲ್ಲಿಯೂ ಸ್ಪಷ್ಟವಾಗಿ 2020 ರಿಂದಲೇ ಜಾರಿಗೆ ಬರುವಂತೆ ಎಂದು ಉಲ್ಲೇಖ ಮಾಡದ ಕಾರಣ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಕಾಂಗ್ರೆಸ್ ಸರ್ಕಾರ ಮುಂದಿಟ್ಟಿದೆ.
ಪ್ರತ್ಯೇಕ ನಿಧಿ ಇಲ್ಲ: 2020 ರಿಂದ ಅನ್ವಯವಾಗುವಂತಿದ್ದರೆ ಇದಕ್ಕಾಗಿ ಯಾವುದೇ ಪ್ರತ್ಯೇಕ ನಿಧಿಯನ್ನು ಹಿಂದಿನ ಸರ್ಕಾರ ಹಂಚಿಕೆ ಮಾಡಿಲ್ಲ. ಈ ಹಿಂದಿನ ಸರ್ಕಾರದ ಆದೇಶವನ್ನು ಮಾರ್ಪಾಡಿಸಲು ಸಾಧ್ಯವಿಲ್ಲ. 2023 ರಿಂದ 2027 ರವರೆಗೆ ನಾಲ್ಕು ವರ್ಷಗಳ ಅವಧಿಯವರೆಗೂ ಬಿಜೆಪಿ ಸರ್ಕಾರದ ಆದೇಶ ಅನ್ವಯವಾಗುತ್ತದೆ. ಯಾವುದೇ ನಿಧಿಯನ್ನು ಮೀಸಲಿಡದ ಕಾರಣ 2027 ರಿಂದಲೇ ಮುಂದಿನ ವೇತನ ಪರಿಷ್ಕರಣೆ ಜಾರಿಯಾಗಲು ಸಾಧ್ಯ ಎಂಬ ನಿಲುವಿಗೆ ಸರ್ಕಾರ ಬಲವಾಗಿ ಅಂಟಿಕೊಂಡಿದೆ.
2020ರಲ್ಲಿ ಏನಾಗಿತ್ತು?: ಕೋವಿಡ್ ಲಾಕ್ಡೌನ್ ಕಾರಣದಿಂದ 2020 ರಲ್ಲಿ ಕೆಲ ತಿಂಗಳು ಬಸ್ಸುಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ನಂತರ ಸೇವೆ ಆರಂಭಗೊಂಡಿದ್ದರೂ ಜನ ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿದ್ದರು. ಕೋವಿಡ್ ಸಮಯದಲ್ಲಿ ಪೂರ್ಣ/ ಅಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಇಲಾಖೆ ಮುಳುಗುವ ಹಂತದಲ್ಲಿತ್ತು.
ಈ ಕಠಿಣ ಪರಿಸ್ಥಿತಿಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ ಸಿಬ್ಬಂದಿ ವೇತನ ಹಾಗೂ ಇತರೇ ಭತ್ಯೆಗಳನ್ನು ಸರ್ಕಾರ ಪಾವತಿ ಮಾಡಿತ್ತು. ಆದರೆ ಸಂಬಳವನ್ನು ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿರಲಿಲ್ಲ. ಕೋವಿಡ್ ನಂತರ ಬಸ್ಸುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಇಳಿದ ಬಳಿಕ 2023 ರಲ್ಲಿ ಬಿಜೆಪಿ ಸರ್ಕಾರ ವೇತನ ಪರಿಷ್ಕರಣೆ ಮಾಡಿತ್ತು.
ನೌಕರರ ವಾದ ಏನು?: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿಲ್ಲ ಮತ್ತು ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಬಸ್ಸುಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿದ್ದರೂ ನಿರ್ವಾಹಕರು ಟಿಕೆಟ್ ಹರಿಯುತ್ತಾರೆ. ಉಚಿತ ಟಿಕೆಟ್ ಹಣವನ್ನು ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಪಾವತಿ ಮಾಡಬೇಕು.
ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 560 ಕೋಟಿ ದಾಟಿ ಮೈಲಿಗಲ್ಲು ಸ್ಥಾಪಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಆದಾಯವೂ ಜಾಸ್ತಿಯಾಗಿದೆ. ಆದಾಯ ಜಾಸ್ತಿಯಾಗಿರುವ ಕಾರಣ ಸರ್ಕಾರ ಸಂಬಳ ಏರಿಕೆ ಮಾಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.
Related









