CRIMENEWSದೇಶ-ವಿದೇಶನಮ್ಮರಾಜ್ಯ

KKRTC: ಅಕ್ರಮವಾಗಿ 5.04 ಕೋಟಿ ಹಣ ಸಾಗಿಸುತ್ತಿದ್ದ ಟಿಐ ಸೇರಿ ಇಬ್ಬರ ಬಂಧಿಸಿದ ಕೇರಳ ಪೊಲೀಸ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಕ್ರಮವಾಗಿ ಐದು ಕೋಟಿ ನಾಲ್ಕು ಲಕ್ಷ ರೂಪಾಯಿಗಳನ್ನು ಸ್ವಂತ ವಾಹನದಲ್ಲಿ ಸಾಗಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮದ ಸಂಚಾರ ನಿರೀಕ್ಷಕ Traffic Inspector (TI) ಸೇರಿ ಇಬ್ಬರನ್ನು ಕೇರಳ ಪೊಲೀಸ್ ಅಧಿಕಾರಿಗಳ ತಂಡ ಹಣದ ಸಹಿತ ವಶಕ್ಕೆ ಪಡೆದಿದೆ.

ಕೆಕೆಆರ್‌ಟಿಸಿ ರಾಯಚೂರು ವಿಭಾಗದದಲ್ಲಿ ಡ್ಯೂಟಿ ಮಾಡುತ್ತಿರುವ ಸಂಚಾರ ನಿರೀಕ್ಷಕ ರಾಘವೇಂದ್ರ ಬಡಿಗೇರ್‌ ಹಾಗೂ ನಿತಿನ್‌ ಎಂಬುವರು ಮೇ 3ರಂದು ತಮ್ಮ ಕಾರಿನ ಸೀಟ್‌ ಕೆಳಗೆ ಅಕ್ರಮವಾಗಿ 5.04 ಕೋಟಿ ರೂ.ಗಳನ್ನು ಸಾಗಿಸುತ್ತಿದ್ದಾಗ ಕೇರಳ ಪೊಲೀಸ್ ಅಧಿಕಾರಿಗಳು ಕರ್ನಾಟಕ-ಕೇರಳ ಗಡಿಯಲ್ಲಿ ತಪಾಸಣೆ ಮಾಡಿದ್ದು ಈ ವೇಳೆ ಕಾರಿನಲ್ಲಿದ್ದ ಹಣವನ್ನು ವಶಕ್ಕೆ ಪಡೆದುಕೊಂಡು ಬಡಿಗೇರ್‌ ಹಾಗೂ ನಿತಿನ್‌ನನ್ನು ಬಂಧಿಸಿದ್ದಾರೆ.

ಇನ್ನು ಇಷ್ಟೊಂದು ಹಣವನ್ನು ಕರ್ನಾಟಕದಿಂದ ಕೇರಳಕ್ಕೆ ಏಕೆ ಸಾಗಿಸುತ್ತಿದ್ದರು, ಈ ಹಣಕ್ಕೆ ದಾಖಲೆಗಳಿವೆಯೆ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟಮಾಹಿತಿ ಸಿಕ್ಕಿಲ್ಲ. ಆದರೆ ಒಂದು ಮೂಲದ ಪ್ರಕಾರ ಈ ಬಡಿಗೇರ್‌ ಸೇರಿದಂತೆ ಇವರ ಸಂಬಂಧಿಕರು ಚಿನ್ನಾಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಇದೆ.

ಅಲ್ಲದೆ ರಾಘವೇಂದ್ರ ಬಡಿಗೇರ್‌ ತಾವು ಡ್ಯೂಟಿ ಮಾಡುವ ಸ್ಥಳದಲ್ಲೂ ಚಿನ್ನಾಭರಣಗಳನ್ನು ಮಾಡಿಕೊಡುತ್ತೇವೆ ಎಂದು ಸಹೋದ್ಯೋಗಿಗಳಿಂದಲೂ ಕಂತಿನ ರೂಪದಲ್ಲಿ ಚೀಟಿ ವ್ಯವಹಾರ ಮಾಡಿ 5000 ರಿಂದ 10000 ರೂಪಾಯಿಗಳನ್ನು ಪ್ರತಿ ತಿಂಗಳು ಚೀಟಿದಾರ ಫಲಾನುಭವಿಗಳಿಂದ ಸಂಗ್ರಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈ ರೀತಿ ಚೀಟಿ ವ್ಯವಹಾರ ಮಾಡಿ ಅದರಿಂದ ಸಂಗ್ರಹಗೊಂಡ ಹಣದಲ್ಲಿ ಚಿನ್ನವನ್ನು ಖರೀದಿಸಿ ಬಳಿಕ ಆ ಚಿನ್ನದಿಂದ ಚೀಟಿದಾರರ ಬೇಡಿಕೆಯಂತೆ ಓಲೆ, ರಿಂಗ್‌ (ಉಂಗುರ) ಮಾಂಗಲ್ಯ ಸರ ಸೇರಿ ಇತರೆ ಆಭರಣಗಳನ್ನು ಮಾಡಿಕೊಡುತ್ತಿದ್ದರು. ಈ ವ್ಯವಹಾರವನ್ನು ಹಲವಾರು ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದ್ದು ಇವರ ಜತೆ ಸಂಬಂಧಿಕರು ಸೇರಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಇದೇ ಮೇ3ರಂದು ಕೂಡ ಚಿನ್ನವನ್ನು ಖರೀದಿಸುವ ಸಲುವಾಗಿ ತಮ್ಮ ಕಾರಿನಲ್ಲಿ 5.04 ಕೋಟಿ ರೂಪಾಯಿಯನ್ನು ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದು, ಈ ವೇಳೆ ಕೇರಳ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಲುಕಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಈ ಹಣಕ್ಕೆ ಯಾವುದೆ ದಾಖಲೆಗಳು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಸದ್ಯ ಈ ಸಂಬಂಧ ಕೇರಳ ಪೊಲೀಸರು ಅಕ್ರಮ ಹಣ ಸಾಗಣೆ ಪ್ರಕರಣ ದಾಖಲಿಸಿಕೊಂಡಿದ್ದು, ಹಣದ ಮೂಲವನ್ನು ಹುಡುಕುವ ಕ್ರಮ ತೆಗೆದುಕೊಂಡಿದ್ದಾರೆ.

Deva
the authorDeva

Leave a Reply

error: Content is protected !!