ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ಕಾರದ ಹಠಮಾರಿ ಧೋರಣೆಯಿಂದ ಬೇಸತ್ತಿರುವ ಸಾರಿಗೆ ನೌಕರರು ನಾಳೆಯಿಂದ (ಏ.7) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.
ಸಾರಿಗೆ ನೌಕರರು ಆರನೇ ವೇತನ ಆಯೋಗ ನಮಗೂ ಜಾರಿ ಮಾಡಿ ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ ಮತ್ತು ಸಾರಿಗೆ ಸಚಿವರು ಇದುವರೆಗೂ ಸಬೂಬು ಹೇಳಿಕೊಂಡು ಬಂದಿದ್ದು, ಯಾವುದೇ ಪ್ರಮುಖ ಬದಲಾವಣೆ ಆಗದ ಕಾರಣ ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ.
ಇನ್ನು ಮುಷ್ಕರ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ಸಚಿವರು ಯತ್ನಿಸುತ್ತಿದ್ದು, ಅವರ ಪ್ರಯತ್ನ ವಿಫಲವಾಗಲಿದೆ ಎಂದು ನೌಕರರ ಹೇಳುತ್ತಿದ್ದಾರೆ. ಜತೆಗೆ ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ವಾಟ್ಸ್ಆಪ್ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಕಡಕ್ ಎಚ್ಚರಿಕೆ ನೀಡುತ್ತಿದ್ದಾರೆ.
ಇಂದು ಸಾರಿಗೆ ನೌಕರರು ಒಗ್ಗಟ್ಟು ಪ್ರದರ್ಶಿಸುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆಯುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಹೀಗಾಗಿ ಸರ್ಕಾರ ಮತ್ತು ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ಅವರ ನ್ಯಾಯಯುತ ಬೇಡಿಕಗಳನ್ನು ಈಡೇರಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಿದೆ.
ಇನ್ನು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದುವರೆಗೂ ಒಂದು ಮಾತನ್ನೂ ಆಡದಿರುವುದಕ್ಕೆ ನೌಕರರು ಆಕ್ರೋಶಗೊಂಡಿದ್ದು, ಇದೇನು ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯುತ್ತಿರುವ ಸರ್ಕಾರವಾ ಅಥವಾ ಸರ್ವಾಧಿಕಾರದ ಸರ್ಕಾರವ ಎಂದು ಕಿಡಿಕಾರುತ್ತಿದ್ದಾರೆ.
ಸಾರಿಗೆ ಸಚಿವರು ಸುದ್ದಿಗೋಷ್ಠಿ ನಡೆಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಮಾತ್ರ ಹೇಳುತ್ತಿದ್ದಾರೆ. ಆದರೆ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಲು ಮೂರೂವರೆ ತಿಂಗಳು ಬೇಕಿತ್ತ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಇಂಥ ಹಾರಿಕೆಯ ಮಾತುಗಳನ್ನು ಬಿಟ್ಟು ಗಂಭೀರವಾಗಿ ನಮ್ಮ ಸಮಸ್ಯೆ ಆಲಿಸಿ ಅದನ್ನು ನಿವಾರಿಸುವ ನಿಟ್ಟಿನಲ್ಲಿ ನಡೆಯಬೇಕು. ನೀವು ಒಬ್ಬ ಸಚಿವರು ಎಂಬುದನ್ನು ಮರೆಯಬಾರದು ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.
ಈ ನಡುವೆ ನಮ್ಮ ಕೆಲಸ ಹೋದರೂ ಚಿಂತೆಯಿಲ್ಲ. ನಾವು ಇನ್ನು ಎಷ್ಟುದಿನ ಅಧಿಕಾರಿಗಳ ಕಿರುಕುಳ, ಕಡಿಮೆ ವೇತನಕ್ಕೆ ದುಡಿಯೋಣ ಹೇಳಿ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸವ ನಮಗೆ ಮಗಲು ಜಾಗವಿಲ್ಲ. ಒಂದು ರೀತಿ ಬೀದಿ ನಾಯಿಯಂತೆ ಸೊಳ್ಳೆಗಳು ಚಳಿಯಿಂದಲೇ ರಾತ್ರಿ ಪೂರ ಕಳೆಯಬೇಕು. ಸರಿಯಾದ ನಿದ್ರೆಯೂ ಇಲ್ಲ.
ಜತೆಗೆ ಎದ್ದಕೂಡಲೇ ನಿತ್ಯಕರ್ಮಗಳನ್ನು ಮುಗಿಸಲು ಸರಿಯಾದ ವ್ಯವಸ್ಥೆ ಇಲ್ಲ. ಇಂಥ ಪರಿಸ್ಥಿತಿಯಲ್ಲೂ ಸಂಸ್ಥೆಗೆ ಆದಾಯ ತರುತ್ತಿದ್ದೇವೆ. ಆದರೆ ಅದು ಸೋರಿಕೆಯಾಗುತ್ತಿದ್ದು, ಆ ಸೋರಿಕೆ ತಡೆಗೆ ಸರ್ಕಾರ ಮುಂದಾಗಿಲ್ಲ. ಜತೆಗೆ ವೇತನ ಸೇರಿ ಎಲ್ಲ ವಿಷಯದಲ್ಲೂ ಸರ್ಕಾರದ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ನಾಳೆಯಿಂದ ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ. ಅದು ಎಷ್ಟು ದಿನಗಳಾದರೂ ಸರಿಯೇ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು 1.30 ಲಕ್ಷ ಸಾರಿಗೆ ನೌಕರರು ಒಗ್ಗಟ್ಟಿನಿಂದ ಹೇಳುತ್ತಿದ್ದಾರೆ.