KSRTC: ಏ.6ರ ಸಭೆಯಲ್ಲಿ ನೌಕರರ ಬೇಡಿಕೆ ಈಡೇರದಿದ್ದರೆ 8ರಿಂದ ಪಾದಯಾತ್ರೆ, 21ರಿಂದ ಆಮರಣಾಂತ ಉಪವಾಸ -ಕೂಟದ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಇದೇ ಏಪ್ರಿಲ್ 6 ರಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆಯಲ್ಲಿರುವ ನೌಕರರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಏ.21ರಿಂದ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

ಈ ಸಂಬಂಧ ಮಾ.31ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಮನವಿ ಪತ್ರ ಸಲ್ಲಿಸಿದ್ದು ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಕಳೆದ ಮಾರ್ಚ್ 29ರಂದು ಹಾವೇರಿಯಲ್ಲಿ ನಡೆದ ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡಿರುವ ನಿರ್ಣಾಯಗಳನ್ನು ಕೂಡ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದು ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಾ.29ರ ಸಭೆಗೆ ಆಗಮಿಸಿದ ಕೂಟದ ಎಲ್ಲ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು 06.04.2026 ರಂದು ನಡೆಯುವ ಸಭೆಯಲ್ಲಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರು 08.04.2026 ರಿಂದ ಚಿತ್ರದುರ್ಗದ ಡಿಸಿ ಕಚೇರಿಯಿಂದ ಪಾದಯಾತ್ರೆ ಹೊರಟು 21.04.2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿ, ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ಹಿಂದೆಯೂ ಕೂಡ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಸರ್ಕಾರಕ್ಕೆ ಮತ್ತು ಸಾರಿಗೆ ಆಡಳಿತ ಮಂಡಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ನಾಲ್ಕೂ ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಹಲವು ಬಾರಿ ಮನವಿ ಪತ್ರಗಳನ್ನು ನೀಡಿ ಒತ್ತಾಯಿಸುತ ಬಂದ್ದೇವೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಆಡಳಿತ ಮಂಡಳಿ ಕಾರ್ಮಿಕ ಸಂಘಟನೆಗಳೊಂದಿಗೆ ಹಲವು ಭಾರಿ ತಮ್ಮ, ಸಾರಿಗೆ ಸಚಿವರ ಹಾಗೂ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಗಳು ನಡೆದರು ಯಾವುದೇ ಅಂತಿಮ ನಿರ್ಧಾರಕ್ಕೆ ಬಾರದೆ ಸಾರಿಗೆ ನೌಕರರಿಗೆ ಸಿಗಬೇಕದ ನ್ಯಾಯಯುತ ಆರ್ಥಿಕ ಸೌಲಭ್ಯಗಳು ಸಿಗದೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ನಿವೃತ್ತಿಗೊಂಡಿರುವ ಲಕ್ಷಾಂತರ ನೌಕರರು ನಾನಾ ರೀತಿಯ ಆರ್ಥಿಕ ಸಮಸ್ಯೆಗಳಿಂದ ಬಳಲುವಂತಾಗಿದೆ.
ಇದೆಲ್ಲ ಮನಗಂಡ ನಾವು ಈ ವಿಚಾರವಾಗಿ ನಮ್ಮ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಹಲವು ಸುತ್ತುಗಳ ಚರ್ಚೆಗಳನ್ನು ಮಾಡಿ ಅಂತಿಮವಾಗಿ 29.03.2026 ರಂದು ಹಾವೇರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳ ಕಾರ್ಯಕಾರಿಣಿ ಹಾಗೂ ಸರ್ವಸದಸ್ಯರ ಸಭೆ ಕರೆದು ಚರ್ಚಿ ಸರ್ವಾನುಮತದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಬೇಡಿಕೆಗಳು: ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೂಡಲೇ ನೀಡುವುದು.
01.01.2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡುವುದು. (ಈಗಾಗಲೇ ಸರ್ಕಾರ 26 ತಿಂಗಳ ವೇತನ ಹಿಂಬಾಕಿ ನೀಡುವ ಸುತ್ತೋಲೆ ಹೊರಡಿಸಿದ್ದು ಬಾಕಿ 12 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರ ಅಥವಾ ಸಂಸ್ಥೆ ಭರಿಸುವುದು.)
ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಈ ಕೂಡಲೆ ನಡೆಸುವುದು. ಈ ಎಲ್ಲ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ 06.04.2026 ರಂದು ನಡೆಯಲ್ಲಿರುವ ಸಭೆಯಲ್ಲಿ ಸೂಕ್ತ ನಿರ್ಣಾಯಗಳನ್ನು ಕೈಗೊಂಡು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವೆಂದರೆ ಮುಂದೆ ನಡೆಯುವ ಹೋರಾಟಗಳು ತೀವ್ರಗೊಂಡು ಬೇರೆ ರೀತಿಯ ಯಾವುದೇ ತಿರುವು ಪಡೆದರೆ ಅದಕ್ಕೆ ಸರ್ಕಾರ ಮತ್ತು ಆಡಳಿತ ಮಂಡಳಿಯೇ ನೇರೆ ಹೊಣೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
Related









